ಸಾಣೇಹಳ್ಳಿ:
ಇಲ್ಲಿನ ಶ್ರೀಮಠದಲ್ಲಿ ಶನಿವಾರ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ದೇವನಾಗುವ ಹಾಗೂ ಆತನ ಬದುಕನ್ನು ಪರಿವರ್ತಿಸುವ ಮಹಾನ್ ಶಕ್ತಿ ಇಷ್ಟಲಿಂಗ ದೀಕ್ಷೆಯಲ್ಲಿದೆ.
“ಮನುಷ್ಯ ಮತ್ತು ಇತರ ಪ್ರಾಣಿಗಳಿಗಿರುವ ಮೂಲ ಅಂತರವೆಂದರೆ ಶಿವಜ್ಞಾನ. ಕಾಡಿನಲ್ಲಿರುವ ಮೃಗಗಳು ಸಂಘಟಿತವಾಗಿ ಬಾಳುತ್ತವೆ, ಆದರೆ ನಾಡಿನಲ್ಲಿರುವ ಮಾನವ ಮೃಗಗಳಿಗೆ ಆ ಸಂಘಟನೆ ಸಾಧ್ಯವಾಗುತ್ತಿಲ್ಲ. ಮನುಷ್ಯ ಸಗಣಿಯ ಹುಳದಂತೆ ಆಗದೆ ಶ್ರೇಷ್ಠನಾಗಬೇಕಾದರೆ ಆತನಿಗೆ ಶಿವಜ್ಞಾನ ಮತ್ತು ಸಂಸ್ಕಾರ ಅಗತ್ಯ. ಶರಣರ ಸಂಗದಿಂದ ವ್ಯಕ್ತಿಯು ತನ್ನ ಅವಗುಣಗಳನ್ನು ಕಳೆದುಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ”.

12ನೇ ಶತಮಾನದ ಶರಣರು ‘ದೇವರು ಕೇವಲ ಕಲ್ಲು, ಮಣ್ಣು, ಚರ್ಚ್, ಮಸೀದಿಗಳಲ್ಲಿಲ್ಲ, ಪ್ರತಿಯೊಬ್ಬರ ಒಳಗಿದ್ದಾನೆ. ‘ಮಾನವನೇ ದೇವನಾಗಬೇಕು, ದೇಹವೇ ದೇಗುಲವಾಗಬೇಕು’. ಅದಕ್ಕೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಅತ್ಯಗತ್ಯ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ. ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಅಂತರಂಗ ಬಹಿರಂಗ ಶುದ್ಧಿ ಸಾಧ್ಯ.
ಒಮ್ಮೆ ಪಡೆದ ಇಷ್ಟಲಿಂಗವನ್ನು ಎಂದಿಗೂ ದೇಹದಿಂದ ಅಗಲಿಸಬಾರದು. ಬೆಳಿಗ್ಗೆ ಮತ್ತು ಸಂಜೆ ಪ್ರಶಾಂತ ಸ್ಥಳದಲ್ಲಿ ಕುಳಿತು ಲಿಂಗಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾವ ಉದ್ಯೋಗವನ್ನೇ ಮಾಡಲಿ, ಅದರಲ್ಲಿ ಶಿವನನ್ನು ಕಾಣುವ ಎಚ್ಚರವಿರಬೇಕು. ಸದಾಚಾರದಂತೆ ಸದಾ ಯಾವುದಾದರೂ ಕಾಯಕದಲ್ಲಿ ತೊಡಗಿರಬೇಕು.

ಶಿವಾಚಾರವು ಜಾತಿ ಭೇದವನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಲು ಬೋಧಿಸಿದರೆ, ಗಣಾಚಾರವು ಸಂಘಟನೆ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸುವುದನ್ನು ಕಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಾಗರಾಜ ಹೆಚ್. ಎಸ್. ಅವರು ವಚನಗಳನ್ನು ಹೇಳಿಕೊಟ್ಟರು. ಸಿರಿಮಠ ಪೂಜಾ ವ್ಯವಸ್ಥೆಗಳನ್ನು ನೆರವೇರಿಸಿಕೊಟ್ಟರು.
