ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ ಅತ್ತಿವೇರಿ
ಸ್ಥಳ: ಬಸವ ಮಂಟಪ, ಮಾಕಾ ಲೇಔಟ್, ಕಲಬುರಗಿ
ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ
ದಿನಾಂಕ: 18 ಏಪ್ರಿಲ್ 2026
ಇಂದಿನ ಪ್ರವಚನದಲ್ಲಿ ಅಕ್ಕಮಹಾದೇವಿ ತಾಯಿಯವರ ಜೀವನ ವೈರಾಗ್ಯ, ಆತ್ಮಸಾಧನೆ ಮತ್ತು ಆಧ್ಯಾತ್ಮಿಕ ಸಾಧನೆಯ ಹಾದಿಯನ್ನು ವಚನಗಳ ಆಧಾರದಲ್ಲಿ ವಿವರಿಸಲಾಯಿತು.
ಉಡುತಡಿಯನ್ನು ತ್ಯಜಿಸಿ ಕಲ್ಯಾಣದ ಕಡೆಗೆ ನಡೆದ ಅವರ ದಾರಿಯಲ್ಲಿ ಎದುರಾದ ಹಸಿವು, ದಾಹ ಮತ್ತು ನಿದ್ರೆಯಂತಹ ಸಂಕಷ್ಟಗಳನ್ನು “ಹಸಿವಾದಡೆ ಬಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆಭಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು”ಎಂಬ ವಚನದ ಮೂಲಕ ಸ್ಪಷ್ಟಪಡಿಸಿದರು.
ಮಧ್ಯದಲ್ಲಿ ಸಿದ್ಧ ಸಾಧುಗಳೊಂದಿಗೆ ನಡೆದ ಸಂವಾದಗಳು ಹಾಗೂ ಆಧ್ಯಾತ್ಮಿಕ ಅನುಭವಗಳು ಮನೋಜ್ಞವಾಗಿ ವಿವರಿಸಲ್ಪಟ್ಟವು. ಕಲ್ಯಾಣದಲ್ಲಿ ಕಿನ್ನರಿ ಬೊಮ್ಮಯ್ಯ ಶರಣರು ಅಕ್ಕಮಹಾದೇವಿಯವರನ್ನು ಪರೀಕ್ಷಿಸಿದ ಘಟನೆ ಹಾಗೂ ನಂತರ ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳಿಂದ ನಡೆದ ಆಳವಾದ ಆಧ್ಯಾತ್ಮಿಕ ಪ್ರಶ್ನೋತ್ತರವು ವೈರಾಗ್ಯದ ನಿಜಸ್ವರೂಪವನ್ನು ತೋರಿಸಿತು.
ನಿರ್ವಿಕಾರ ಸ್ಥಿತಿಯನ್ನು ಅಳವಡಿಸಿಕೊಂಡ ಅಕ್ಕಮಹಾದೇವಿಯವರು, ಅಲ್ಲಮಪ್ರಭುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ “ಅಕ್ಕ” ಎಂಬ ಗೌರವಪದವನ್ನು ಪಡೆದರು. ಈ ಸಂದರ್ಭದಲ್ಲಿ ನಡೆದ ಸಂವಾದದ ಮಹತ್ವ ಮತ್ತು ಪರಸ್ಪರ ವಿನಯತೆಯ ಮೌಲ್ಯಗಳನ್ನು ಪ್ರವಚನಕಾರರು ವಿವರಿಸಿದರು.

ನಂತರ ಅಕ್ಕಮಹಾದೇವಿಯವರು ಶ್ರೀಶೈಲದ ಕದಳಿ ಬನದಲ್ಲಿ ಶಿವಯೋಗದ ಮೂಲಕ ಪರಮಾತ್ಮನೊಂದಿಗಿನ ಏಕತ್ವವನ್ನು ಸಾಧಿಸಿದ ಬಗ್ಗೆ ತಿಳಿಸಲಾಯಿತು.
ಪ್ರವಚನದ ಅಂತ್ಯದಲ್ಲಿ, ಬಸವಣ್ಣನವರ ಕಾಲದ ಕಲ್ಯಾಣವನ್ನು “ಸುವರ್ಣ ಯುಗ” ಎಂದು ವರ್ಣಿಸಿ, ಶರಣರ ಸಮೂಹದಲ್ಲಿ ಸಾಮೂಹಿಕ ಆತ್ಮಜ್ಞಾನ ಸಾಧ್ಯವಾಗಿದ್ದು, ಮಹಿಳೆಯರು ಸಹ ಮುಕ್ತಿಯನ್ನು ಪಡೆದಿರುವುದು ಲಿಂಗಾಯತ ಧರ್ಮದ ವೈಶಿಷ್ಟ್ಯವೆಂದು ಹೇಳಿದರು. ಇಂತಹ ಸಮಾನತೆ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಗೆ ಮಾರ್ಗದರ್ಶನ ನೀಡಿದ ಬಸವಣ್ಣನವರ ಬಗ್ಗೆ ಎಲ್ಲರೂ ಕೃತಜ್ಞರಾಗಿರಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಬಸವ ತತ್ವಗಳ ಮಹತ್ವವನ್ನು ಮತ್ತಷ್ಟು ಗಾಢವಾಗಿ ಪರಿಚಯಿಸಿತು.
