‘ಕೌದಿ’ ನಾಟಕ ಪ್ರದರ್ಶನ
ಗದಗ:
ರಂಗಭೂಮಿಯಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಅನೇಕ ನಾಟಕಗಳನ್ನು ನೋಡಬಹುದು. ನಾಟಕಗಳಿಂದ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸುಲಭವಾಗುತ್ತದೆ. ಕನ್ನಡ ನಾಡು-ನುಡಿಗೆ ರಂಗಭೂಮಿಯ ಕೊಡುಗೆ ಅಪಾರವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೮೦೬ನೆಯ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಮನುಷ್ಯ ಸಮಾಜಜೀವಿ. ಸಮಾಜದ ಭಾಗವಾಗಿ ಬದುಕಬೇಕಾದ ಅನಿವಾರ್ಯತೆ ಇದೆ. ಬದುಕಿನ ಸಹಜತೆಯನ್ನು ಮೀರಿ ಸವಾಲುಗಳನ್ನು ಎದುರಿಸುವಾಗ ಬದುಕಿನ ನಿಜ ಸತ್ಯಗಳನ್ನು ನಾಟಕಗಳಂತಹ ರಂಗಪ್ರದರ್ಶನಗಳ ಮೂಲಕ ಅನಾವರಣ ಮಾಡುತ್ತೇವೆ. ಮನುಷ್ಯನ ಭಾವನೆಗಳ ಅಭಿವ್ಯಕ್ತಿಗೆ ಈ ನಾಟಕಗಳು ಅವಶ್ಯ ಎಂದು ಶ್ರೀಗಳು ಮಾತನಾಡಿದರು.

‘ರಂಗಭೂಮಿ ಮಹತ್ವ’ ಕುರಿತು ಲೇಖಕ ಗಣೇಶ ಅಮೀನಗಡ ಮಾತನಾಡಿ, ಸಾಹಿತ್ಯ, ಸಂಗೀತ, ನಾಟಕ, ವಚನಗಳನ್ನು ಕೇಳುವುದರಿಂದ ಮನಸ್ಸಿಗೆ ಆನಂದವಾಗುತ್ತದೆ. ಒಳ್ಳೆಯ ಅಭ್ಯಾಸಗಳಿಂದ ಬಿಪಿ, ಶುಗರ್ ಅನೇಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು. ರಂಗಭೂಮಿಗೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ರಂಗಭೂಮಿ ಮತ್ತು ಸಂಗೀತ ಕ್ಷೇತ್ರಕ್ಕೆ ಗದಗ ನಗರದ ಕೊಡುಗೆ ಅಪಾರವಾದುದು.
ಮನುಷ್ಯನಿಗೆ ಓದುವ ಚಟ, ಸಂಗೀತದ ಚಟ, ನಾಟಕದ ಚಟದಂತಹ ಒಳ್ಳೆಯ ಚಟಗಳು ಇರಬೇಕು. ಪಾಲಕರು ಮೊಬೈಲ್ನಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಬೇಕು ಎಂದು ವಿನಂತಿಸಿ ಮಾತನಾಡಿದರು.
ಮೈಸೂರಿನ ಕವಿತಾ ಕಲಾ ತಂಡದಿಂದ ‘ಕೌದಿ’ ನಾಟಕ ಪ್ರದರ್ಶನ ನಡೆಯಿತು.

ಶಿವಾನುಭವದಲ್ಲಿ ಮಾಜಿ ಅಧ್ಯಕ್ಷರಾಗಿದ್ದ ಸಿದ್ಧಣ್ಣ ಬಂಗಾರಶೆಟ್ಟರ ದಂಪತಿಗಳನ್ನು ಹಾಗೂ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಪಿ.ಎಸ್. ಉಗಲಾಟ, ಅಧ್ಯಕ್ಷರು ರೋಟರಿ ಸಂಸ್ಥೆ ಗದಗ-ಬೆಟಗೇರಿ, ಮಲ್ಲಿಕಾರ್ಜುನ ಸಿ. ಚಂದಪ್ಪನವರ ಅಧ್ಯಕ್ಷರು ರೋಟರಿ ಸಂಸ್ಥೆ, ಗದಗ ಸೆಂಟ್ರಲ್, ಪ್ರವೀಣ್ ವಾರಕರ ಅಧ್ಯಕ್ಷರು ಲಾಯನ್ಸ್ ಸಂಸ್ಥೆ ಗದಗ ಇವರಿಗೆ ಗೌರವ ಸನ್ಮಾನ ಜರುಗಿತು.
ವಚನ ಸಂಗೀತ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣ ದೀಕ್ಷಾ ಸಂಗನಾಯ್ಕರ, ವಚನ ಚಿಂತನ ಪ್ರತೀಕ್ಷಾ ಮಹಾಂತೇಶ ಪೂಜಾರ ಮಾಡಿದರು. ದಾಸೋಹ ಸೇವೆ ಡಾ. ಜಿ. ಬಿ. ಪಾಟೀಲ ಮತ್ತು ಪರಿವಾರದವರು ವಹಿಸಿಕೊಂಡಿದ್ದರು.

ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ನಿರೂಪಣೆಯನ್ನು ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ವಿದ್ಯಾ ಗಂಜಿಹಾಳ ಮಾಡಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
