ಭಾಲ್ಕಿ:
ರೈತರು ನಮ್ಮ ದೇಶದ ಬೆನ್ನೆಲಬು. ಅವರ ಪರಿಶ್ರಮದಿಂದಲೇ ನಮಗೆ ಅನ್ನ ದೊರೆಯುತ್ತದೆ. ಅವರ ಬೆವರ ಹನಿಯಿಂದ ನಾವು ಬದುಕುತ್ತಿದ್ದೇವೆ. ಅಧುನಿಕ ತಂತ್ರಜ್ಞಾನ ಎಷ್ಟೆ ಬೆಳೆದರೂ ಅನ್ನದ ಅಗಳನ್ನು ತಯಾರಿಸಲು ಸಾಧ್ಯವಿಲ್ಲ. ಅದು ರೈತನಿಂದಲೇ ಸಾಧ್ಯ ಎಂದು ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.
ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ವಚನ ಜಾತ್ರೆ-೨೦೨೬ ಮತ್ತು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ೨೭ನೆಯ ಸ್ಮರಣೋತ್ಸವ ಹಾಗೂ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ಯ ಈಚೆಗೆ ೭೫ ಕೃಷಿಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ತಂತ್ರಜ್ಞಾನ ಬೆಳೆದ ಹಾಗೆ ನಮ್ಮ ದೇಶದ ಯುವಕರಿಗೆ ನೌಕರಿಗಳು ಕಡಿಮೆಯಾಗುತ್ತಿವೆ. ಅದಕ್ಕಾಗಿ ನಾವು ಕೃಷಿಯ ಕಡೆ ಗಮನ ಕೊಡಬೇಕಾಗಿದೆ. ಕೃಷಿ ನಮ್ಮ ಮೂಲ ಸಂಸ್ಕೃತಿಯಾಗಿದೆ. ಅದನ್ನು ಮರೆತಿರುವುದರಿಂದ ನಮ್ಮ ಬಾಳಿನಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ.
ದೇಶಕ್ಕೆ ಅನ್ನ ಕೊಡುವ ರೈತನ ಪರಿಸ್ಥಿತಿ ಅತ್ಯಂತ ಕಷ್ಟಕರವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ರೈತನಿಗೆ ಹೆಣ್ಣು ಸಿಗುವುದು ಬಹಳ ಅಪರೂಪವಾಗಿದೆ. ಈ ಬೆಳವಣಿಗೆ ಸರಿಯಲ್ಲ ಎಂದರು.

ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಶ್ರೀ ಗುರುನಂಜೇಶ್ವರ ಮಠ, ಭರತನೂರು, ಪೂಜ್ಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು, ಖಾಸಾ ಮಠ, ಗುರುಮಠಕಲ್ಲ, ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ವಿಜಯಮಹಾಂತೇಶ ಶಾಖಾ ಮಠ, ಸಿದ್ಧಯ್ಯ ಕೋಟೆ, ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ವಿಜಯಮಹಾಂತೇಶ ಶಾಖಾ ಅನುಭವಮಂಟಪ, ಲಿಂಗಸುಗೂರು, ಪೂಜ್ಯ ಚನ್ನಬಸವ ಮಹಾಸ್ವಾಮಿಗಳು, ಚೌಕಿಮಠ ಮಂಠಾಳ, ಪೂಜ್ಯ ಘನಲಿಂಗ ರುದ್ರಮುನಿ ಮಹಾಸ್ವಾಮಿಗಳು, ಸಂಸ್ಥಾನ ಹಿರೇಮಠ ರಾಜೇಶ್ವರ ಅವರು ಸಾನಿಧ್ಯ ವಹಿಸಿಕೊಂಡಿದ್ದರು.

ಸಿದ್ರಾಮಪ್ಪ ಅಣದೂರೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಗೌರವ ಅತಿಥಿಗಳಾಗಿ, ಗುರುನಾಥ ಗಡ್ಡೆ, ಮಲ್ಲಿಕಾರ್ಜುನ ಸ್ವಾಮಿ, ಬಸವರಾಜ ದೇಶಮುಖ, ಡಾ. ವೈಜನಾಥ ಬುಟ್ಟೆ, ಬಂಡೆಪ್ಪ ಕಂಟೆ, ರವಿ ಮೀಸೆ, ಪ್ರಕಾಶ ಘೂಳೆ, ಸುನೀಲ ಮಾಳಗೆ ಆಗಮಿಸಿದ್ದರು.
ಪ್ರೊ. ಆರತಿ ಪಾತ್ರೆ ನಿರೂಪಿಸಿದರು. ಶಿಖರೇಶ್ವರ ಶಟಕಾರ ಅವರಿಂದ ಶರಣು ಸಮರ್ಪಣೆ ನಡೆಯಿತು.
