ಬಸವಕಲ್ಯಾಣ :
ಮಾದರ ಚೆನ್ನಯ್ಯ ಅರಿವು ಪೀಠ ಟ್ರಸ್ಟ್ ವತಿಯಿಂದ ಈಚೆಗೆ ಕಾಯಕ ದಿನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಯಕಯೋಗಿ ಮಾದಾರ ಧೂಳಯ್ಯ ಶರಣರ ಜನ್ಮದಿನ ನಿಮಿತ್ತ, ಪೀಠದ ಸಂಚಾಲಕರಾದ ಚೇತನಾ ಸಿ. ಭಾಗವತ ಅವರು ಉಪನ್ಯಾಸ ನೀಡಿದರು.
ಅವರು ಮಾತನಾಡುತ್ತಾ, ಬಸವಧರ್ಮ ಬಿಟ್ಟು ಜಗತ್ತಿನ ಯಾವ ಧರ್ಮಗಳಲ್ಲಿಯೂ ಕಾಯಕಕ್ಕೆ ಮಹತ್ವ ನೀಡಿದ್ದನ್ನು ನಾವು ಕಾಣುವುದಿಲ್ಲ.
ಸನಾತನ ಧರ್ಮದ ವೈದಿಕರು ಶ್ರಮದಾನ ಮಾಡುವ ಶ್ರಮಜೀವಿಗಳನ್ನು ಮತ್ತು ಅವರ ಶ್ರಮವನ್ನು ವಿಭಜಿಸಿ ಶೂದ್ರರನ್ನಾಗಿ ಅಂದರೆ ಗುಲಾಮರನ್ನಾಗಿ ಮಾಡಿ ಶೋಷಣೆ ಮಾಡಿದ್ದನ್ನು ನಾವು ಕಾಣುತ್ತೇವೆ.
ಆದರೆ 12ನೇ ಶತಮಾನ ಅದು ಒಂದು ಕ್ರಾಂತಿಯ ಯುಗ. ಸತ್ಯಶುದ್ದ ಕಾಯಕಗಳಿಂದ, ವಚನ ಸಾಹಿತ್ಯ ರಚನೆಯಿಂದ, ಜ್ಞಾನ ದಾಸೋಹಗಳಿಂದ, ರೂಪಿತಗೊಂಡ ವ್ಯಕ್ತಿತ್ವ ವಿಕಸನ ಮಾಡಿಕೊಂಡು ಕರ್ಮಸಿದ್ಧಾಂತಕ್ಕೆ ಸೆಡ್ಡು ಹೊಡೆದು ಕಾಯಕ ಸಿದ್ದಾಂತ ಮಾರ್ಗದರ್ಶನ ಮಾಡಿದ ಬಸವಾದಿ ಶರಣರ ಕಾಲವದು.
ತನ್ನ ಬದುಕಿನ ಬಾಹ್ಯ ಕ್ರಿಯೆಗಳನ್ನು ಕಾಯಕಕ್ಕೆ, ಅಂತರಂಗದ ಕ್ರಿಯೆಗಳನ್ನು ಆಧ್ಯಾತ್ಮಕ್ಕೆ ಸರ್ಮಪಿಸಿಕೊಂಡ ಸ್ವತಂತ್ರ ಚಿಂತನಾಶೀಲ ವ್ಯಕ್ತಿತ್ವವಳ್ಳ ಮಾದರ ಧೂಳಯ್ಯರದು ನಿರ್ಲಿಪ್ತ ಭಾವದ ಸ್ವಭಾವ.

ಕಲ್ಯಾಣದಲ್ಲಿದ್ದರೂ ಇದ್ದರೋ, ಇಲ್ಲವೋ ಎನ್ನುವಷ್ಟರ ಮಟ್ಟಿಗೆ ತಾನಾಯಿತು ತನ್ನ ಕಾಯಕವಾಯಿತು. ತನ್ನ ಚಮ್ಮಾರಿಕೆ ಕಾಯಕದಲ್ಲಿ ಪರಮಾತ್ಮನ ಸಾಕ್ಷಾತ್ಕಾರ ಕಾಣಬಂದವರು. ನನ್ನ ಕಾಯಕದಲ್ಲಿಯೇ ಭಗವಂತ ಇದ್ದಾನೆ ನೀನು ನಿನ್ನ ಭಜಿಸುವ, ಆರಾಧಿಸುವ ಭಕ್ತರ ಕಡೆಗೆ ಹೋಗು, ನೀನಗೇನು ಕೆಲಸ ಇಲ್ಲಿ ಎಂದು ದೇವರನ್ನು ಪ್ರಶ್ನಿಸಿ ತನ್ನ ತಾನು ಕಾಯಕಕ್ಕೆ ಸರ್ಮಪಿಸಿಕೊಂಡು, ಕಾಯಕವನ್ನೇ ದೈವವನ್ನಾಗಿ ಕಂಡವರು ಧೂಳಯ್ಯ ಶರಣರು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡುತ್ತಾ, ಜಗದ ಎಲ್ಲರು ಕಾಯಕ ಮಾಡುವಾಗ ಮನುಷ್ಯ ಜಡವಾಗಲು ಸಾಧ್ಯವಿಲ್ಲ ಎಂದು ಶರಣರು ಕಾಯಕ್ಕೆ ಮತ್ತು ಕಾಯಕಕ್ಕೆ ಮಹತ್ವ ನೀಡಿ, ಕಾಯಕಜೀವಿಗಳಿಗೆ ಬಸವಣ್ಣನವರು ಕಾಯಕ ಧರ್ಮ ನೀಡಿ ಗೌರವಿಸಿದರು ಎಂದರು.
ಪೂಜ್ಯ ಶ್ರೀಕಾಂತ ಸ್ವಾಮೀಜಿ ಅಧ್ಯಕ್ಷೀಯ ಭಾಷಣ ಮಾಡಿದರು. ಹಲವಾರು ಜನ ಬಸವಭಕ್ತರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

🙏🙏🙏
ಕಾಯಕ ಸಮಾಜವೇ ಶ್ರೇಷ್ಠ ಸಮಾಜ ಎಂದು ಹೇಳಿದ ವಿಭಿನ್ನ ವಚನಕಾರ ಶ್ರೀ ಮಾದಾರ ಧೂಳಯ್ಯ ನವರು ಕಾಲತೀತ ಸತ್ಯವನ್ನು ಹೇಳಿದ್ದಾರೆ