ಕೊಪ್ಪಳ:
ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆಸಲು ಉದ್ಧೇಶಿಸಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ನಿಷೇಧಿಸಬೇಕು. ಸಮಾವೇಶಕ್ಕೆ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ಬರುವುದನ್ನು ತಡೆಯಬೇಕು. ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸೋಮವಾರ ಜಿಲ್ಲಾಧಿಕಾರಿಗಳ ಮುಖಾಂತರ ಸಂಘಟನೆಗಳ ಪ್ರಮುಖರು ಸರ್ಕಾರಕ್ಕೆ ಸಲ್ಲಿಸಿದರು.
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಈ ಹಿಂದೆ ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆಯನ್ನು ಬಳಸಿ ಅಪಮಾನ ಮಾಡಿದ್ದಾರೆ.
ಈ ಸಂಬಂಧ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಅವರಿಗೆ ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿವೆ. ಆದರೂ ಈ ಮನುಷ್ಯ ಬಸವತತ್ವವನ್ನು ತಿರುಚುವ, ಲಿಂಗಾಯತ ಧರ್ಮವನ್ನು ಕಲುಷಿತ ಮಾಡುವ, ಬಸವಭಕ್ತರನ್ನು ನಿಂದಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ.

ಲಿಂಗಾಯತ ಧರ್ಮಿಯರ ಪವಿತ್ರಕ್ಷೇತ್ರ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಉದ್ದೇಶಿತ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಮತ್ತೇ ಬಸವತತ್ವವನ್ನು ತಿರುಚುವ, ಲಿಂಗಾಯತ ಧರ್ಮವನ್ನು ಕಲುಷಿತಗೊಳಿಸುವ ಕೆಲಸ ಮಾಡುತ್ತಾರೆ. ಮತ್ತು ಬಸವತತ್ವದವರನ್ನು ಬಸವ ತಾಲಿಬಾನಿ ಎಂದು ಹೀಯಾಳಿಸುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದೇ ಇವರ ಸಮಾವೇಶದ ಮುಖ್ಯ ಕೆಲಸವಾಗಿದೆ.
ಆದ್ದರಿಂದ ಬಸವಕಲ್ಯಾಣದಲ್ಲಿ ಲಿಂಗಾಯತ ಮತ್ತು ಬಸವದ್ರೋಹಿ ಕನ್ನೇರಿ ಸ್ವಾಮಿಯ ಕಾರ್ಯಕ್ರಮ ರದ್ದುಗೊಳಿಸಬೇಕು ಮತ್ತು ಅವರ ಬಸವಕಲ್ಯಾಣ ಪ್ರವೇಶವನ್ನು ನಿಷೇಧಿಸಬೇಕು.
ಶಾಂತಿ ಭಂಗ ಮಾಡುವ, ಕೋಮು-ಗಲಭೆ ಮಾಡುವ, ಜನರ ಮದ್ಯೆ ವಿಷಬೀಜ ಬಿತ್ತುವ ಈ ಅವಿವೇಕದ ಕನ್ನೇರಿ ಮಠದ ಸ್ವಾಮಿಯ ವಿರುದ್ಧ ತುರ್ತಾಗಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಅಧ್ಯಕ್ಷರಾದ ಹನುಮೇಶ ಕಲ್ಮಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ತಾಲೂಕಾ ಕಾರ್ಯದರ್ಶಿ ಶರಣಬಸವನಗೌಡ ಪಾಟೀಲ, ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟನ ಅಧ್ಯಕ್ಷರಾದ ವೀರಭದ್ರಪ್ಪ ನಂದ್ಯಾಳ, ಕಾರ್ಯದರ್ಶಿ ಬಾಪುಗೌಡ ಪಾಟೀಲ, ಮುಖ್ಯಸ್ಥರಾದ ಜಿ. ದೇವೀಶಪ್ಪ, ಶಿವಪುತ್ರಪ್ಪ ಲಕ್ಕುಂಡಿ, ಮುಖಂಡರಾದ ಗಾಳೆಪ್ಪ ಕಡೆಮನಿ, ಎಮ್.ಎಸ್. ಬೀರಲದಿನ್ನಿ, ಗುಡದಪ್ಪ ಹಡಪದ, ಶಿವಸಂಗಪ್ಪ ವಣಗೇರಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಮಂಜುನಾಥ ಹಿರೇಮಠ, ಮಹಿಳಾ ಮುಖ್ಯಸ್ಥರಾದ ಶರಣಮ್ಮ ಕಲ್ಮಂಗಿ ಇನ್ನಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
