ಚಾಮರಾಜನಗರ :
ಹತ್ತಿರದ ಮರಿಯಾಲ ಗ್ರಾಮದ ಶ್ರೀ ಮುರುಘರಾಜೇಂದ್ರ ವಿರಕ್ತ ಮಠದಲ್ಲಿ ಇದೇ ಮೇ 15ರಿಂದ 17, 2026 ರವರೆಗೆ ದಾವಣಗೆರೆ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ವತಿಯಿಂದ ಮತ್ತು ದಾವಣಗೆರೆ ಬಸವ ಬಳಗದ ಸಹಕಾರದಲ್ಲಿ 21 ನೇ ಶರಣತತ್ವ ಕಮ್ಮಟ ನಡೆಯಿತು.
ಕಾರ್ಯಕ್ರಮದಲ್ಲಿ ಮೊದಲ ದಿನ ಬೆಳಗ್ಗೆ 6:30 ರಿಂದ 7:30 ರವರೆಗೆ ಬಸವಣ್ಣನವರ ಮಹತ್ವಾಕಾಂಕ್ಷೆಯ ನೆಲೆಗಟ್ಟಿನ ಇಷ್ಟಲಿಂಗ ಶಿವಯೋಗವನ್ನು ಅನುಭಾವಿ ಪಿ. ರುದ್ರಪ್ಪ ಅವರು ಅದರ ವೈಜ್ಞಾನಿಕ, ಮಾನಸಿಕ, ಆಧ್ಯಾತ್ಮಿಕ ಉಪಯೋಗದ ಮಹತ್ವವನ್ನು ಎಲ್ಲರಿಗೂ ತಿಳಿಸಿ, ನಡೆಸಿಕೊಟ್ಟರು.

ನಂತರ ಬಸವ ಭಕ್ತರು ಹಾಗೂ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರೂ ಸೇರಿ ಬಸವಣ್ಣನವರ ಪುತ್ಥಳಿಯೊಂದಿಗೆ ಗ್ರಾಮದಲ್ಲಿ ಪಥಸಂಚಲನ ಮಾಡಲಾಯಿತು.
ಮೆರವಣಿಗೆ ಸಂದರ್ಭದಲ್ಲಿ ಗ್ರಾಮಸ್ಥರು ಭಕ್ತಿ ಭಾವದಿಂದ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿದರು. ಪಥಸಂಚಲನದಲ್ಲಿ ಇಮ್ಮಡಿ ಮುರಘರಾಜೇಂದ್ರ ಸ್ವಾಮೀಜಿ, ಅಜ್ಜಂಪುರ ಸೇವಾ ಟ್ರಸ್ಟಿನ ಪ್ರಮುಖರು, ಸದಸ್ಯರು, ಮೇಲಾಜಿಪುರದ ಬಸವಾನುಭವ ಮಂಟಪ ಆಶ್ರಮದ ಪೂಜ್ಯ ಶಿವಬಸವಸ್ವಾಮಿಗಳು, ವಿಶ್ವ ಬಸವಸೇನೆಯ ಅಧ್ಯಕ್ಷರಾದ ಬಸವಯೋಗೇಶ ಮತ್ತು ಪದಾಧಿಕಾರಿಗಳು, ಚಾಮರಾಜನಗರ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಹೆಗ್ಗೊಠಾರ ವಿಜಿ ಮತ್ತು ಮರಿಯಾಲ ಗ್ರಾಮದ ಮುಖಂಡರು ಭಾಗಿಯಾಗಿದ್ದರು.

16ರ 2ನೇ ದಿನ ಬೆಳಿಗ್ಗೆ 6:30 ರಿಂದ 7:30 ರ ತನಕ ಇಷ್ಪಲಿಂಗ ಶಿವಯೋಗ ಕಾರ್ಯಕ್ರಮ ಮುಗಿಸಿ ನಂತರ ಪಥಸಂಚಲನವನ್ನು ಜಿಲ್ಲಾ ಕೇಂದ್ರಸ್ಥಾನ ಚಾಮರಾಜನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮರಿಯಾಲ ಮಠದ ಪೂಜ್ಯ ಇಮ್ಮಡಿ ಮುರಘರಾಜೇಂದ್ರ ಸ್ವಾಮೀಜಿಗಳು, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಪೂಜ್ಯ ಚನ್ನಬಸವ ಸ್ವಾಮಿಗಳು ಪಥಸಂಚಲನಕ್ಕೆ ಚಾಲನೆ ನೀಡಿದರು.

ಪಥಸಂಚಲನದಲ್ಲಿ ಮೇಲಾಜಿಪುರದ ಪೂಜ್ಯ ಶಿವಬಸವಸ್ವಾಮೀಜಿ, ಪೂಜ್ಯ ಮಹಾದೇವಸ್ವಾಮೀಜಿ, ಶರಣ ತುರಗಾಯಿ ರಾಮಣ್ಣ ಗೋಶಾಲೆ ಹಾಗೂ ಅಜ್ಜಂಪುರ ಟ್ರಸ್ಟಿನ ಸದಸ್ಯರು, ವಿಶ್ವಬಸವ ಸೇನೆಯ ಅಧ್ಯಕ್ಷ ಬಸವಯೋಗೇಶ ಹಾಗೂ ಸದಸ್ಯರು, ಮತ್ತು ಬಸವ ಭಕ್ತರೆಲ್ಲಾ ಭಾಗಿಯಾಗಿದ್ದರು.

ಚಾಮರಾಜನಗರ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗಲ್ಲಿರುವ ಅಶ್ವಾರೂಢ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ಬಸವ ಭಕ್ತರು ಬಸವಾದಿ ಶರಣರಿಗೆ ಜೈಕಾರ ಹಾಕುತ್ತಾ ಮೆರವಣಿಗೆ ನಡೆಸಲಾಯಿತು. ನಂತರ ಕಮ್ಮಟ ನಡೆಸಲು ಆಯೋಜಿಸಿದ್ದ ಸ್ಥಳಕ್ಕೆ ಆಗಮಿಸಲಾಯಿತು.
