ವಿಜಯಪುರ:
ಬದುಕು ಬೆಳಗುವ ಶಿಕ್ಷಣ ಪ್ರಸಾರಕ್ಕಾಗಿ ಇಡೀ ಸಂಪತ್ತನ್ನೇ ದಾಸೋಹ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರ ಕೊಡುಗೆ ಸದಾ ಸ್ಮರಣೀಯ ಎಂದು ನಾಗಠಾಣ ಶಾಸಕ ವಿಠಲ ಕಟಕಧೋಂಡ ಹೇಳಿದರು.
ಲಿಂಗರಾಜರ ಮಹೋನ್ನತ ವಿಚಾರಧಾರೆಗಳು, ದೂರದೃಷ್ಟಿಯ ಫಲದಿಂದ ಉಣ್ಣುತ್ತಿರುವ ನಾವೆಲ್ಲ ಈ ಮಹಾನ್ ಚಿಂತಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಗೊಳಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಕಮಲಾಬಾಯಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್, ಶಿರಸಂಗಿ ಲಿಂಗರಾಜ ವಿವಿಧೋದ್ಧೇಶ ಸಂಸ್ಥೆ, ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರ ಸಂಘ, ಲಿಂಗಾಯತ ಕುಡುಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ, ವಿಜಯಪುರ, ಬಾಗಲಕೋಟೆ ಹಾಗೂ ಅಥಣಿ ಕುಡುಒಕ್ಕಲಿಗ ಸಮುದಾಯದ ಸಹಯೋಗದಲ್ಲಿ ನಗರದ ಅಥಣಿ ರಸ್ತೆಯ ಶ್ರೀ ಜಿ.ಕೆ. ಪಾಟೀಲ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ಯಾಗವೀರ ಶಿರಸಂಗಿ ಮಹಾರಾಜರ ಹೆಸರಿನಲ್ಲಿ ಪ್ರಸಕ್ತ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡುತ್ತ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅತ್ಯಗತ್ಯ, ಕುಡುಒಕ್ಕಲಿಗ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸುತ್ತಿರುವುದು ಆತ್ಮಗೌರವದ ಸಂಗತಿ.
ಈ ಬಾರಿ ನೆರೆಯ ಬಾಗಲಕೋಟೆ, ಅಥಣಿ ಭಾಗದ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಅಗತ್ಯವಾಗಿ ಬೇಕು. ಸಮಾಜದ ಪ್ರಮುಖರು ಸಮಾಜವನ್ನು ಶೈಕ್ಷಣಿಕವಾಗಿ ಬೆಳೆಸಲು ನೇರವು ನೀಡಬೇಕು. ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ ಮಾತನಾಡಿ, ಪ್ರತಿಭೆ ಎನ್ನುವುದು ಜನ್ಮದಿಂದ ಬಂದ ಗುಣ, ಪಾಂಡಿತ್ಯ ಎನ್ನುವುದು ಸತತ ಅಧ್ಯಯನ, ಕಠಿಣ ಪರಿಶ್ರಮದಿಂದ ಲಭಿಸುತ್ತದೆ. ಪ್ರತಿಭೆಯನ್ನು ಪೋಷಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪಾಲಕರ ಜವಾಬ್ದಾರಿ ಎಂದರು.
ಇಂಡಿ-ಕವಲಗಿಯ ಶ್ರೀ ಸಿದ್ದರಾಮೇಶ್ವರ ಸಂಸ್ಥಾನಮಠದ ಪೂಜ್ಯ ಡಾ. ಅಭಿನವ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದರು.

ಅಣ್ಣಾಸಾಹೇಬಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಆರ್.ಎಸ್. ಜನಗೊಂಡ, ಭಾಗಪ್ಪಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಆನಂದ ಖೇಡ, ಶೇಖರ ಜಲಪುರೆ, ಮಮತಾ ಬನ್ನೂರ, ಎಸ್.ಎ. ಬಿರಾದಾರ ಭಾಗವಹಿಸಿದ್ದರು. ಲಿಂಗಾಯತ ಕುಡುಒಕ್ಕಲಿಗ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
