ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಹೇಳಿಕೆ
ಬೀದರ :
ವಿಶ್ವಗುರು ಬಸವಣ್ಣನವರ ತತ್ವಾಚರಣೆಯಂತೆ ಡಾ. ಶಿವಕುಮಾರ ಸ್ವಾಮೀಜಿ ನಡೆದರು, ಅವರಲ್ಲಿ ಬಸವಣ್ಣನವರ ನಿಜಾಚರಣೆ ಇತ್ತು, ಎಂದು ತುಮಕೂರು ಸಿದ್ದಗಂಗಾ ಮಠದ ಕಿರಿಯ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕ ಹಾಗೂ ಮಠದ ಹಿತೈಷಿಗಳು ಇತ್ತೀಚಿಗೆ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ಹೇಳಿಕೊಟ್ಟ ಅಕ್ಷರ ಮತ್ತು ಅನ್ನ ದಾಸೋಹಕ್ಕೆ ವಿಶೇಷ ಮಹತ್ವ ನೀಡಿದ್ದ ಸ್ವಾಮೀಜಿಗಳು, ಇಡೀ ಜೀವನದಲ್ಲಿ ಬಸವಣ್ಣನ ನಿಜವಾದ ಆದರ್ಶಗಳು ಅನುಸರಿಸಿದರು.
ಶಿಕ್ಷಣದ ಮೂಲಕವೇ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅರಿತು, ಸಾವಿರಾರು ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ಒದಗಿಸಿ ಅವರ ಜೀವನವನ್ನು ರೂಪಿಸಿದರು ಎಂದು ವಿವರಿಸಿದರು.
ಸಾನಿಧ್ಯ ವಹಿಸಿದ್ದ ಗಂಗಾಂಬಿಕಾ ಅಕ್ಕ ಅವರು, ಶಿಕ್ಷಣ ಮತ್ತು ದಾಸೋಹ ಕ್ಷೇತ್ರದಲ್ಲಿ ಸಿದ್ಧಗಂಗಾ ಮಠದ ಕೊಡುಗೆ ಅಪಾರವಾಗಿದೆ. ಅದು ಎಲ್ಲ ಮಠಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಬಸವರಾಜ ಬಲ್ಲೂರ ಅವರು, ಶಿವಕುಮಾರ ಸ್ವಾಮೀಜಿ ಅವರ ಸೇವೆಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಅವರ ಕಾರ್ಯಗಳನ್ನು ಮುಂದುವರಿಸುವಲ್ಲಿ ಶಿವಸಿದ್ದೇಶ್ವರ ಸ್ವಾಮೀಜಿಗಳು ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿಡಗುಂದಾ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರಕಾಶ ಟೊಣ್ಣೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಉದ್ಯಮಿ ಅನಿಲಕುಮಾರ ಪಾಟೀಲ, ಮುಖಂಡರಾದ ಬಸವರಾಜ ಧನ್ನೂರ, ಬಾಬುವಾಲಿ, ನಾಗರಾಜ ಕರ್ಪೂರ, ಚಂದ್ರಶೇಖರ ಹೆಬ್ಬಾಳೆ, ವಿರೂಪಾಕ್ಷ ಗಾದಗಿ, ಮಡಿವಾಳಪ್ಪ ಮಂಗಲಗಿ, ಶಾಂತಾ ಖಂಡ್ರೆ, ಶಿವಕುಮಾರ ಪಾಟೀಲ ತೇಗಂಪುರ, ರಮೇಶ್ ಪಾಟೀಲ ಪಾಶಾಪುರ, ಮಠದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
