ಸುತ್ತೋಲೆ ವಾಪಸ್ಸು ಪಡೆಯದಿದ್ದರೆ ಏಪ್ರಿಲ್ 29 ಬೆಂಗಳೂರು ಮಹಾಸಭಾ ಕಚೇರಿಯಲ್ಲಿ ಪ್ರತಿಭಟನೆ; 30ರಂದು ಅಲ್ಲೇ ಬಸವ ಜಯಂತಿ
ಬೀದರ್
ಶರಣ ಸಮಾಜದಲ್ಲಿ ಬಿರುಗಾಳಿಯೆಬ್ಬಿಸಿರುವ ಶಂಕರ ಬಿದರಿಯವರ ಸುತ್ತೋಲೆಯನ್ನು ಹಿಂದೆ ಪಡೆಯಲು ಶಾಮನೂರು ಶಿವಶಂಕರಪ್ಪ ಅವರ ಜೊತೆ ಚರ್ಚೆ ನಡೆಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಈ ಬಸವ ಜಯಂತಿಯಂದು ರೇಣುಕಾ ಜಯಂತಿಯನ್ನೂ ಆಚರಿಸಲು ಏಪ್ರಿಲ್ 2 ಸುತ್ತೋಲೆ ಕಳಿಸಿದ್ದರು.
ಬಿದರಿ ಸುತ್ತೋಲೆಯ ವಿರುದ್ಧ ರಾಜ್ಯಾದ್ಯಂತ ಪ್ರಕಟವಾಗಿರುವ ಆಕ್ರೋಶದ ಹಿನ್ನಲೆಯಲ್ಲಿ ಶನಿವಾರ ಬೀದರಿನಲ್ಲಿ ಲಿಂಗಾಯತ ಮಠಾಧೀಶರ ಮತ್ತು ಬಸವ ಸಂಘಟನೆಗಳ ಪ್ರತಿಭಟನೆ ನಡೆಯಿತು. ನಂತರ ನಿಯೋಗವೊಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಖಂಡ್ರೆಯವರನ್ನು ಭೇಟಿ ಮಾಡಿ ಸುತ್ತೋಲೆ ಹಿಂದೆ ಪಡೆಯುವಂತೆ ಮನವಿ ಸಲ್ಲಿಸಿದರು.
ಮಾರ್ಚಿನಲ್ಲಿ ವೀರಶೈವ ಸಂಘಟನೆಗಳು ರೇಣುಕಾ ಜಯಂತಿಯನ್ನು ಆಚರಿಸಿದಾಗ ಯಾವ ಬಸವ ಸಂಘಟನೆಯೂ ಪ್ರತಿಭಟಿಸಲಿಲ್ಲ. ಈಗ ಬಸವ ಜಯಂತಿಯ ಜೊತೆ ಮತ್ತೇ ರೇಣುಕಾ ಜಯಂತಿಯನ್ನು ಆಚರಿಸಬೇಕೆಂದು ವೀರಶೈವ ಮಹಾಸಭಾ ಆದೇಶ ನೀಡಿರುವ ಔಚಿತ್ಯವೇನು ಎಂದು ಖಂಡ್ರೆಯವರನ್ನು ನಿಯೋಗದ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಬಿದರಿ ಕಳಿಸಿದ ಸುತ್ತೋಲೆ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಬೇಕೆಂದು ಹೇಳಿದರೆ ಅದೀಗ ಪಂಚಾಚಾರ್ಯ ಯುಗಮಾನೋತ್ಸವವಾಗಿ ಬದಲಾಗಿದೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಮಹಾಸಭೆಯ ಕಾರ್ಯಕ್ರಮ ಸಮಾಜದಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಖಂಡ್ರೆಗೆ ಹೇಳಲಾಯಿತು.
ಅದಕ್ಕೆ ಖಂಡ್ರೆ ಬಿದರಿ ಕಳಿಸಿರುವ ಸುತ್ತೋಲೆಯಲ್ಲಿ ತಮ್ಮ ಪಾತ್ರವೇನೂ ಇಲ್ಲ, ಅದರ ಬಗ್ಗೆ ತಮ್ಮಲ್ಲಿಯೂ ಯಾವುದೇ ಮಾಹಿತಿ ಇರಲಿಲ್ಲವೆಂದು ಹೇಳಿದರು. ಈ ಸುತ್ತೋಲೆಯ ಉದ್ದೇಶ ತಮಗೂ ಅರ್ಥವಾಗಿಲ್ಲ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಸುತ್ತೋಲೆ ವಾಪಸ್ಸು ಪಡೆಯದಿದ್ದರೆ ಏಪ್ರಿಲ್ 29 ಬೆಂಗಳೂರಿನ ವೀರಶೈವ ಮಹಾಸಭಾದ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ನಿಯೋಗದ ಸದಸ್ಯರು ಖಂಡ್ರೆಗೆ ಎಚ್ಚರಿಕೆ ನೀಡಿದರು. ನಂತರ 30ರಂದು ಬಸವ ಜಯಂತಿಯನ್ನು ವೀರಶೈವ ಮಹಾಸಭಾದ ಕಚೇರಿಯಲ್ಲೇ ಆಚರಿಸುವುದಾಗಿಯೂ ಹೇಳಲಾಯಿತು.
ಅದಕ್ಕೆ ಖಂಡ್ರೆಯವರು ತಕ್ಷಣವೇ ಈ ವಿಷಯವನ್ನು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು. ಜಾತಿ ಗಣತಿಯಿಂದ ಆಗಲೇ ನಮ್ಮ ಸಂಖ್ಯೆ ಕ್ಷೀಣಿಸುತ್ತಿದೆ, ಈಗ ಮತ್ತೊಂದು ದೊಡ್ಡ ಒಡಕು ಮಾಡಿಕೊಳ್ಳುವುದು ಬೇಡ. ಪ್ರತಿಭಟನೆ ಕೈ ಬಿಡಿ, ಮೊದಲಿನ ಹಾಗೆಯೇ ಬಸವ ಜಯಂತಿ ನಡೆಯುತ್ತದೆ ಎಂದು ಹೇಳಿದರು.
ಎಲ್ಲರೂ ಮುಕ್ತವಾಗಿ ಮಾತನಾಡಿದ ಸಭೆಯಲ್ಲಿ ಮಾಧ್ಯಮಗಳಿಗೆ ಆಹ್ವಾನವಿರಲಿಲ್ಲ. ವಿಡಿಯೋ ತೆಗೆಯಲೂ ನಿರ್ಬಂಧವಾಗಿತ್ತೆಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗವಹಿಸಿದ ಕೆಲವರ ಜೊತೆ ಮಾತನಾಡಿ ಬಸವ ಮೀಡಿಯಾ ಮಾಹಿತಿ ಕಲೆಹಾಕಿದೆ.
ಸಭೆಯಲ್ಲಿ ಈ ವಿವಾದ ಲಿಂಗಾಯತ ಧರ್ಮದ ಬಗ್ಗೆ ಸರಿಯಾದ ಜ್ಞಾನ, ಸಾಮಾನ್ಯ ತಿಳುವಳಿಕೆಯೂ ಇಲ್ಲದೆ ಬಿದರಿ ಸೃಷ್ಟಿಸಿರುವ ಸಮಸ್ಯೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.
ಲಿಂಗಾಯತ ಧರ್ಮದ ಬಗ್ಗೆ ಸರಿಯಾದ ಜ್ಞಾನ, ಸಾಮಾನ್ಯ ತಿಳುವಳಿಕೆಯೂ ಇಲ್ಲದೆ ಶಂಕರ ಬಿದರಿ ಸೃಷ್ಟಿಸಿರುವ ಸಮಸ್ಯೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಬಸವಕಲ್ಯಾಣ ಬಸವ ಮಹಾಮನೆಯ ಸಿದ್ಧರಾಮ ಶರಣರು ಬೆಲ್ದಾಳ, ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣ ಬಸವಧರ್ಮ ಪೀಠದ ಸಿದ್ರಾಮೇಶ್ವರ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ ಖಾಜಾಪೂರ, ಯುವ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಗಣೇಶ ಬಿರಾದಾರ, ಮುಖಂಡರಾದ ಬಾಬುವಾಲಿ, ಜೈರಾಜ ಖಂಡ್ರೆ, ಸಂಜೀವಕುಮಾರ ಪಾಟೀಲ, ಶರಣಪ್ಪ ಮಿಠಾರೆ, ಶ್ರೀಕಾಂತ ಸ್ವಾಮಿ, ಶಿವರಾಜ ಪಾಟೀಲ ಅತಿವಾಳ, ಬಸವರಾಜ ಬುಳ್ಳಾ, ಶ್ರೀನಾಥ ಕೋರೆ, ರವಿ ಪಾಪಡೆ, ದಾನಿ ಬಾಬುರಾವ್ ಮತ್ತಿತರರು ನಿಯೋಗದಲ್ಲಿ ಪಾಲ್ಗೊಂಡಿದ್ದರು.
ಶಾಮನೂರು ಅಸಮಾಧಾನ
ಬಿದರಿ ಸುತ್ತೋಲೆಯ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸುತ್ತೋಲೆಗೆ ಶರಣ ಸಮಾಜದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ ಮಹಾಸಭೆಯ ಹಲವಾರು ಪದಾಧಿಕಾರಿಗಳು ಶಾಮನೂರು ಶಿವಶಂಕರಪ್ಪ ಅವರನ್ನು ಸಂಪರ್ಕಿಸಿದರು.
ಅವರಿಗೆಲ್ಲಾ ಶಾಮನೂರು ಶಿವಶಂಕರಪ್ಪ ಅವರು ಕಳೆದ ವರ್ಷದಂತೆಯೇ ಬಸವ ಜಯಂತಿಯನ್ನು ಆಚರಿಸಲು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾ ಚಾರಿ ಮತ್ತು ಬಸವಣ್ಣನವರು ಒಟ್ಟಿಗೆ ಇರಲು ಸಾಧ್ಯವೇ ಇಲ್ಲ
ಶಾಮನೂರು ಶಿವಶಂಕರಪ್ಪನವರು ಕಳೆದ ಬಾರಿಯಂತೆ ಈ ಬಾರಿಯೂ ಬಸವ ಜಯಂತಿ ಆಚರಿಸಿ ಎಂದು ಹೇಳಿದರೆ ಸಾಲದು ಬದಲಾಗಿ ರಾಜ್ಯ ಘಟಕದ ಅಧ್ಯಕ್ಷರಿಗೆ ಸುತ್ತೋಲೆಯನ್ನು ಹಿಂಪಡೆಯಲು ಆದೇಶಿಸಬೇಕು. ಅದಕ್ಕೂ ಅವರು ಬಗ್ಗದಿದ್ದಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ತಮ್ಮ ಅಧಿಕಾರ ಚಲಾಯಿಸಿ ಆ ಸುತ್ತೋಲೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಇವರದ್ದೂ ಕುಮ್ಮಕ್ಕು ಇರಬಹುದೇನೋ ಎಂಬ ಅನುಮಾನ ಮತ್ತು ಗೊಂದಲಗಳು ಲಿಂಗಾಯತ ಸಮಾಜದಲ್ಲಿ ಉದ್ಭವವಾಗುತ್ತವೆ.