“ಕುಡುಕರು ತಿನುಕರು ಸಿದ್ದೇಶ್ವರ ಅಪ್ಪರ ಶಿಷ್ಯರು ಅಂದ್ರೆ ನಡೀತದ“
ರಬಕವಿ-ಬನಹಟ್ಟಿ
ಕಳೆದ ಶುಕ್ರವಾರ ಬನಹಟ್ಟಿಯಲ್ಲಿ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಕನ್ನೇರಿ ಸ್ವಾಮಿ ಒಂದು ಗಂಟೆ ಮಾತನಾಡಿದರು.
ಎಲ್ಲಾ ಲಿಂಗಾಯತರು ತಾವು ಹಿಂದೂಗಳು ಎಂದು ಒಪ್ಪಿಕೊಳ್ಳುವವರೆಗೂ ತಮ್ಮ ಬೈಗುಳ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿ, ಲಿಂಗಾಯತ ಧರ್ಮದ ಪ್ರಮುಖರ ಮೇಲೆ ಏಕ ವಚನದಲ್ಲಿಯೇ ನಾಲಿಗೆ ಹರಿಬಿಟ್ಟರು.
“ಇವರ ಹೆಸರು ಹೇಳುವುದಿಲ್ಲ, ಯಾಕಂದರೆ ನಾನು ಹೆಸರು ಹೇಳಿದರೆ ಅವರು ದೊಡ್ಡವರಾಗುತ್ತಾರೆ,” ಎಂದು ಪೀಠಿಕೆಯೂ ಹಾಕಿದರು.
“ನೀಚ ಐಎಎಸ್ ಅಧಿಕಾರಿ“
ಮೊದಲು ಕನ್ನೇರಿ ಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದು ಅವರು ಹೇಳಿದಂತೆ “ಒಬ್ಬ ನೀಚ ಮಾಜಿ ಐಎಎಸ್ ಅಧಿಕಾರಿ”ಯ ಮೇಲೆ.
“ಸಂಘಟಿತ ಲಿಂಗಾಯತ ಸಮಾಜವನ್ನು ಒಡೆಯಲು ಇವ ವೀರಶೈವ ಮತ್ತು ಲಿಂಗಾಯತರನ್ನು ಭಾಗ ಮಾಡಲು ಹೊರಟಿದ್ದಾನೆ. ಆ ಗೆಜೆಟ್, ಈ ಗೆಜೆಟ್ ಅಂತ ಹೇಳಿ ಜನರ ತಲೆ ಕೆಡಿಸುತ್ತಿದ್ದಾನೆ,” ಎಂದು ಹೇಳಿದರು.
“ಕುಡುಕ, ತಿನುಕ ರಾಜಕಾರಣಿ“
ನಂತರ ಕನ್ನೇರಿ ಸ್ವಾಮಿಯ ಸಿಟ್ಟು ತಿರುಗಿದ್ದು ಒಬ್ಬ ಪ್ರಮುಖ ರಾಜಕಾರಣಿಯ ಮೇಲೆ.
“ಕುಡುಕರು ತಿನುಕರು ಲಿಂಗಾಯತ ಧರ್ಮ ಕಟ್ಟೋದಿಕ್ಕೆ ಹೊರಟಿದ್ದಾರೆ,” ಎಂದು ಭಾಷಣದಲ್ಲಿ ಹೇಳಿದರು.
“ಕೆಲವರು ಮುಂಜಾನೆ ಕುಡಿದೇ ಎದ್ದು ನಿಲ್ಲಕ್ ಬರೋದಿಲ್ಲ, ರಾತ್ರಿ ಕುಡೀಲಾರ್ದೆ ಮಲಕೊಳ್ಳಾಕ್ ಬರೋದಿಲ್ಲ. ಇಂತ ರಾಜಕಾರಣಿಗಳು ಬಸವ ಧರ್ಮ ಕಟ್ಟಾಕ್ ಹೊರಟಿದ್ದಾರೆ., ಮತ್ ಮ್ಯಾಲೆ ಹೇಳ್ತಾರೆ ನಾವು ಸಿದ್ದೇಶ್ವರಪ್ಪ ಅವರ ಶಿಷ್ಯರು ಅಂತ. ಕುಡುಕರು ತಿನುಕರು ಸಿದ್ದೇಶ್ವರ ಅಪ್ಪರ ಶಿಷ್ಯರು ಅಂದ್ರೆ ನಡೀತದ,” ಎಂದು ಕನ್ನೇರಿ ಸ್ವಾಮಿ ಕೇಳಿದರು.
ಕಳೆದ ಚುನಾವಣೆಯ ಸಮಯದಲ್ಲಿ ಈ ಹಿರಿಯ ರಾಜಕಾರಣಿ ಊಟ ಮಾಡುತ್ತಿರುವ ಫೋಟೋ ತಿದ್ದಿ ಒಂದು ಪಕ್ಷದ ಐಟಿ ಸೆಲ್ ಹಂಚಿಕೊಂಡಿತ್ತು. ಅವರ ತಟ್ಟೆಯಲ್ಲಿ ಹಾಕಿದ್ದ ಮಾಂಸಾಹಾರ ಫೇಕ್ ಎಂದು ಮೂಲ ಫೋಟೋ ಸಿಕ್ಕ ಮೇಲೆ ಸಾಬೀತಾಗಿತ್ತು.
ಇದೇ ರಾಜಕಾರಣಿಯ ವಿಷಯಕ್ಕೆ ಕನ್ನೇರಿ ಸ್ವಾಮಿ ಮತ್ತೆ ಬಂದರು. ನಿಷೇದದ ನಂತರ ಕನ್ನೇರಿ ಸ್ವಾಮಿ ಕ್ಷಮಾಪಣೆ ಕೇಳಿದರೆ ತಾವೇ ವಿಜಯಪುರ ಜಿಲ್ಲೆಗೆ ಕರೆತರುವುದಾಗಿ ಈ ರಾಜಕಾರಣಿ ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯೆಯಾಗಿ “ವಿಜಯಪುರ ಜಿಲ್ಲೆ ಮಾಲೀಕ ನೀನೆ ಏನಪ್ಪಾ,” ಎಂದು ಕನ್ನೇರಿ ಸ್ವಾಮಿ ಭಾಷಣದಲ್ಲಿ ಕೇಳಿದರು.
“ಈ ಮಾತ ಜನ ಎಲೆಕ್ಷನ್ ತನಕ ನೆನಪಿನಲ್ಲಿ ಇಟ್ಟುಕೊಂಡರೆ ನೀ ಹೊರಳಿ ಬರೋದಿಲ್ಲ. ಇಲ್ಲಾಂದ್ರೆ ಎಲೆಕ್ಷನ್ ಬಂದಾಗ ನಾನು ಹೋಗಿ ನೆನಪು ಮಾಡಿ ಬಂದ್ರೆ ನೀ ಉಳಿಯೋದಿಲ್ಲ,” ಎಂದು ಎಚ್ಚರಿಕೆ ನೀಡಿದರು.
“ಕುರಾನ್ ಅನುವಾದಕ ಸ್ವಾಮೀಜಿ“
ಕನ್ನೇರಿ ಸ್ವಾಮಿಯ ಕಾಕದೃಷ್ಟಿ ಪ್ರಮುಖ ಲಿಂಗಾಯತ ಸ್ವಾಮೀಜಿಯವರೊಬ್ಬರ ಮೇಲೆ ತಿರುಗಿತು.
“ಈಗ ಗದಗದ ತೋಂಟದಾರ್ಯ ಮಠದ ಪೀಠದಲ್ಲಿರುವ ಸ್ವಾಮೀಜಿ ಮುಂಚೆ ಬೆಳಗಾವಿಯ ನಾಗನೂರು ಮಠದಲ್ಲಿದ್ದಾಗ ಮರಾಠಿ ಭಾಷೆಯಿಂದ ಕುರಾನ್ ಗ್ರಂಥವನ್ನು ಅನುವಾದ ಮಾಡಿ ತಮ್ಮ ಮಠದ ವತಿಯಿಂದಲೇ ಪ್ರಕಟಿಸಿದ್ದರು,” ಎಂದು ಕನ್ನೇರಿ ಸ್ವಾಮಿ ಹೇಳಿದರು.
ಬನಹಟ್ಟಿ ಭಾಷಣದಲ್ಲಿ ಕನ್ನೇರಿ ಸ್ವಾಮಿ ಕಂಬಿ ಇಲ್ಲದ ಬಿಟ್ಟ ಹಲವಾರು ರೈಲುಗಳಲ್ಲಿ ಇದೂ ಒಂದು.
ನಾಗನೂರು ಸ್ವಾಮೀಜಿ ಅನುವಾದ ಮಾಡಿದ್ದು ಕುರಾನ್ ಅಲ್ಲ ಸಂತ ವಿನೋಬಾ ಭಾವೆ ಅವರ ಕೃತಿಗಳನ್ನು. ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತೇವೆ.
ಕನ್ನೇರಿ ಸ್ವಾಮಿ ತಮ್ಮ ಭಾಷಣದಲ್ಲಿ ಲಿಂಗಾಯತ ಧರ್ಮದ ಹೋರಾಟದಲ್ಲಿರುವ ಅನೇಕರ ಮೇಲೆ ಇದೇ ದಾಟಿಯಲ್ಲಿ ಮಾತನಾಡಿದರು.
ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಒಬ್ಬ ಮುಸ್ಲಿಂ ಪ್ರಚಾರಕ ಮಸೀದಿಗೆ ಹೋಗಿ ಪ್ರಚಾರ ಮಾಡಲಿ, ಲಿಂಗ ಕಟ್ಟಿಕೊಳ್ಳಲಿ, ಎಂದು ಹೇಳಿದರು.
ಬಾಲ ಯೇಸು ಪ್ರಶಸ್ತಿ ಪಡೆದ ಒಬ್ಬ ಸ್ವಾಮೀಜಿ ಮತಾಂತರದ ಬಗ್ಗೆ ಯಾಕೆ ಮಾತನಾಡುವುದಿಲ್ಲ, ಎಂದು ಕೇಳಿದರು.
ಕನ್ನೇರಿ ಸ್ವಾಮಿ ಮುಂಚಿನ ಕುಚೇಷ್ಟೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಮತ್ತೊಬ್ಬರನ್ನು ನಾಯಿಗಳಿಗೂ ಹೋಲಿಸಲಾಯಿತು.

Hindu is not religion it the way of life as per supreme court