ಡಾ. ದಯಾನಂದ ನೂಲಿ ಅವರ ‘ಶರಣರ ಶಿವಯೋಗ’ ಕೃತಿ ಲೋಕಾರ್ಪಣೆ

ಬೆಳಗಾವಿ:

ಶಿವಯೋಗವು ಪರಮಾತ್ಮನ ಐಕ್ಯತೆಯನ್ನು ಸಾಧಿಸುವ ಅನುಭಾವದ ಮಾರ್ಗವಾಗಿದೆ. ಇದು ಕೇವಲ ಬಾಹ್ಯ ಪೂಜೆಯಲ್ಲ ಬದಲಿಗೆ ಕಾಯಕ ಮತ್ತು ದಾಸೋಹದ ಮೂಲಕ ಅಂತರಂಗ, ಬಹಿರಂಗದ ಶುದ್ಧಿ ಹಾಗೂ ಲಿಂಗಾಂಗ ಸಾಮರಸ್ಯವನ್ನು ಸಾಧಿಸುವ ಅಖಂಡ ಯೋಗವಾಗಿದೆ.

ಇಂತಹ ಶಿವಯೋಗದ ಕುರಿತು ಡಾ. ದಯಾನಂದ ನೂಲಿ ಅವರು ರಚಿಸಿರುವ “ಶರಣರ ಶಿವಯೋಗ” ಎಂಬ ಗ್ರಂಥವು 21ನೇ ಶತಮಾನಕ್ಕೆ ದಾರಿ ದೀಪವಾಗಲಿದೆ ಹಾಗೂ ಐತಿಹಾಸಿಕವಾಗಿ ಉಳಿಯಲಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ರವಿವಾರ ಶಿವಬಸವ ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ನಾಗನೂರು ರುದ್ರಾಕ್ಷಿಮಠ ಹಾಗು ಸ್ವಾನುಭವ ನೆಲೆಯಲ್ಲಿ ಅಂತರ್ಜಾಲ ವೇದಿಕೆ ಇವರ ಸಹಯೋಗದೊಂದಿಗೆ ಖ್ಯಾತ ವೈದ್ಯ ಸಾಹಿತಿ ಡಾ. ದಯಾನಂದ ನೂಲಿ ಅವರು ರಚಿಸಿದ “ಶರಣರ ಶಿವಯೋಗ” ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ, ಶಬ್ದಗಳಿಂದ ಅಳೆಯಲಾಗದ, ವರ್ಣಿಸಲಾಗದ ಯೋಗವೇ ಶರಣರ ಶಿವಯೋಗ. ಅದರ ಅನುಕರಣೆ ಜನಸಾಮಾನ್ಯರಿಗೆ ತೀರಾ ಕಷ್ಟ. ಬೆಳಕಿನಿಂದ ಮಹಾಬೆಳಕಿನವರೆಗೆ ಅದು ನಮ್ಮನ್ನು ಕೊಂಡೊಯುತ್ತದೆ. ಇಂತಹ ಶಿವಯೋಗವನ್ನು ಕಠಿಣವಾದರೂ ಪ್ರತಿಯೊಬ್ಬ ಶರಣರು ಪ್ರತಿನಿತ್ಯ ಮಾಡಬೇಕು ಎಂದರು.

ಗ್ರಂಥ ಪರಿಚಯಿಸಿ ಮಾತನಾಡಿದ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅವಿನಾಶ ಕವಿ ಶರಣರ ಶಿವಯೋಗ ಗ್ರಂಥ ಅರಿವು, ಆಚಾರ ಹಾಗೂ ಅನುಭಾವಗಳ ಭಾವಸಂಗಮವಾಗಿದ್ದು, ಪ್ರಗತಿಪರ ಆಲೋಚನೆ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ರೂಪಗೊಂಡ ಲಿಂಗಾಯತ ಧರ್ಮದ ಸಂಪೂರ್ಣ ಪರಿಚಯ ಇದರಲ್ಲಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಅದಲ್ಲದೇ ಶಿವಯೋಗವು ಹೇಗೆ ಕಾಯಕಯೋಗ, ಹಠಯೋಗ, ಧ್ಯಾನಯೋಗ, ಜ್ಞಾನಯೋಗ ಹಾಗು ಭಕ್ತಿಯೋಗಗಳ ಸಂಗಮವಾಗಿದೆ ಎಂಬುದಕ್ಕೆ ಗ್ರಂಥ ವೈದ್ಯಕೀಯ ದಾಖಲೆ ನೀಡಿದೆ ಎಂದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು, ಚಿಕ್ಕೋಡಿ ಸಂಪಾದನಾ ಮಠದ ಸಂಪಾದನಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಸಮಾರಂಭದ ಅಂಗವಾಗಿ ಹಮ್ಮಿಕೊಂಡ ಶಿವಾನುಭವ ಚಿಂತನೆಯಲ್ಲಿ ಸಿಂಧನೂರಿನ ಪಿ. ರುದ್ರಪ್ಪ ಅವರು ‘ಶರಣರ ದೃಷ್ಟಿಯಲ್ಲಿ ದೇವರ ಸ್ವರೂಪ’ ಎಂಬ ವಿಷಯದ ಕುರಿತು ಮಾತನಾಡಿ  ಹಾಗೂ ಬೆಂಗಳೂರಿನ ಭಾರತಿ ಕೆಂಪಯ್ಯ ಅವರು ‘ಶರಣರ ದೃಷ್ಟಿಯಲ್ಲಿ ಸೃಷ್ಟಿ’ ಎಂಬ ವಿಷಯದ ಕುರಿತು ಶಿವಾನುಭವ ಚಿಂತನೆ ನಡೆಸಿದರು.

ಕಾರ್ಯಕ್ರಮದಲ್ಲಿ ಗ್ರಂಥ ದಾಸೋಹಿಗಳಾದ ಖ್ಯಾತ ವೈದ್ಯ ಡಾ. ಸುರೇಶ ಪಟ್ಟೇದ ಹಾಗೂ ಡಾ. ಶೋಬನಾ ಪಟ್ಟೇದ, ಡಾ. ಎಫ್. ವಿ. ಮಾನ್ವಿ, ಡಾ. ಎಚ್. ಬಿ. ರಾಜಶೇಖರ, ಬಿ.ಎಸ್. ಗವಿಮಠ, ಯ.ರು. ಪಾಟೀಲ, ಹಮೀದಾ ಬೇಗಂ ದೇಸಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಖ್ಯಾತ ಜನಪದ ಗಾಯಕ ಮಂಜುನಾಥ ಮಡಿವಾಳರ ಹಾಗೂ ತಂಡದವರಿಂದ ನಡೆದ ವಚನ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.  ಡಾ. ಪಿ.ಜಿ. ಕೆಂಪಣ್ಣವರ ನಿರೂಪಿಸಿದರು. ಶಿಕ್ಷಕ ಶಿವಾನಂದ ಅರಭಾವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಶಿಕ್ಷಕರಾದ ಮಡಿವಾಳಪ್ಪ ಸಂಗೊಳ್ಳಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *