ಗಂಗಾವತಿ:
ಇಂದಿನ ಧಾವಂತದ ಬದುಕಿನಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ನಮ್ಮ ಹಿಂದಿನ ಹಿರಿಯರಿಗೆ ಈಗಿನಷ್ಟು ಅನುಕೂಲತೆಗಳು ಇಲ್ಲದೇ ಇದ್ದಾಗಲು ನೆಮ್ಮದಿಯಿಂದ ಪರಸ್ಪರ ಹಂಚಿಕೊಂಡು ಬಾಳುತ್ತಿದ್ದರು.
ಮಕ್ಕಳ ಸಂತೋಷದ ಬಾಲ್ಯವನ್ನಂತು ಇಂದಿನ ಮಾರ್ಕ್ಸ್ ಕಾಂಪಿಟೇಷನ್ ಕಿತ್ತುಕೊಂಡಿದೆ. ಪಾಲಕರು ಪಕ್ಕದ ಮನೆಯ ಹುಡುಗನಿಗೆ ಹೋಲಿಕೆ ಮಾಡಿ ಅವನ ಸ್ವಂತಿಕೆಯನ್ನೇ ಹಾಳು ಮಾಡುತ್ತಿದ್ದಾರೆ.
ಇಂದಿನ ಧಾವಂತದ ಬದುಕಿಗೆ ಸತ್ಸಂಗ ಅವಶ್ಯಕತೆ ತುಂಬಾನೆ ಇದೆ ಎಂದು ಗಂಗಮ್ಮ ಹಿರೇಮಠ ಮರ್ಲಾನಹಳ್ಳಿ ಅವರು ಅಭಿಪ್ರಾಯಪಟ್ಟರು.
ಚನ್ನಮಲ್ಲಿಕಾರ್ಜುನ ಮಠದಲ್ಲಿ ಸ್ಥಳೀಯ ಬಸವಪರ ಸಂಘಟನೆಗಳು ಆಯೋಜಿಸಿದ “ವಚನಶ್ರಾವಣ – 2026” ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಾ, ಶರಣರ ವಚನಗಳ ಚಿಂತನೆಗೈದರು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಉದ್ಘಾಟಿಸಿದ ಟ್ರಸ್ಟ್ ನ ಸದಸ್ಯರಾದ ಕೆ. ಚನ್ನಬಸಯ್ಯಸ್ವಾಮಿ ಅವರು, ಕೃಷಿ ಪ್ರಧಾನವಾದ ನಮ್ಮ ನಾಡಲ್ಲಿ ಶ್ರಾವಣ ಮಾಸದಲ್ಲಿ ರೈತಾಪಿ ಜನರಿಗೆ ಬಿಡುವು ಇರುತ್ತದೆ. ಆ ಹಿನ್ನೆಲೆಯಲ್ಲಿ ಈ ಮಾಸವು ಒಳ್ಳೆಯ ಮಾತುಗಳನ್ನು ಕೇಳಲು ನಮ್ಮ ಹಿರಿಯರು ಪುರಾಣ, ಪ್ರವಚನ ನಡೆಸುತ್ತಿದ್ದರು ಎಂದು ಆಯೋಜಿಸಿದ ಸಂಘಟಕರಿಗೆ ಮೆಚ್ಚುಗೆ ಸೂಚಿಸಿದರು.
ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಇವರು ವಚನಗಳ ಚಿಂತನೆ ಜೊತೆಗೆ ವಚನಗಳನ್ನು ಬದುಕಿನಲ್ಲಿ ಅಳವಡಸಿಕೊಳ್ಳುವುದು ಆಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಎಚ್. ಸಿದ್ದನಗೌಡ ವಕೀಲರು, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇಂದಿನ ಜಾತಿವ್ಯವಸ್ಥೆ ವೃತ್ತಿಯಿಂದ ನಿರ್ಮಾಣವಾಗಿದೆ ಎಂದು, ಇಂತಹ ಕಾರ್ಯಕ್ರಮಗಳು ಹೆಚ್ಚಲಿ ಎಂದು ಆಶಿಸಿದರು.
ಸಾನಿಧ್ಯ ವಹಿಸಿದ್ದ ಪೂಜ್ಯ ನಾಗಭೂಷಣ ಶಿವಾಚಾರ್ಯರು, ವಚನವೆಂದರೆ ಪ್ರಮಾಣ. ಸಂಸ್ಕಾರವಂತರನ್ನಾಗಿಸುವದೇ ಧರ್ಮದ ಆಶಯ. ಕಿಂಕರತ್ವದಲ್ಲಿ ಶಂಕರತ್ವ ಇದೆ ಎಂದು ಸ್ವರಚಿತ ತಮ್ಮ ಕವನಗಳನ್ನು ವಾಚಿಸಿದರು.

ಹಿರಿಯರಾದ ಗಾಳಿ ರುದ್ರಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ. ನಾಗರಾಜ, ನಾಗಲಾಂಬಿಕಾ ಮಹಿಳಾಗಣದ ಅಧ್ಯಕ್ಷೆ ಚನ್ನಬಸಮ್ಮ ಕಂಪ್ಲಿ ಉಪಸ್ಥಿತರಿದ್ದರು.
ವಿರೇಶ ಅಸರಡ್ಡಿ ಅವರು ಸ್ವಾಗತಿಸಿ, ಕೆ. ಬಸವರಾಜ, ವಿರೇಶ ಕುಂಬಾರ ಅವರು ಶರಣರ, ಸೃಷ್ಟಿಕರ್ತನ ಸ್ಮರಣೆ ನಡೆಸಿಕೊಟ್ಟರು.

ಎ. ಕೆ. ಮಹೇಶಕುಮಾರ ನಿರೂಪಿಸಿ, ವಿನಯಕುಮಾರ ಅಂಗಡಿ ಶರಣು ಸಮರ್ಪಣೆ ಮಾಡಿದರು.
ಆಯ್ದ 30 ಮನೆಗಳಲ್ಲಿ ವಚನ ನಿರ್ವಚನೆ ನಡೆದು ಸೆಪ್ಟಂಬರ್ 11, 2026ರಂದು ಜಯನಗರದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಲೋತ್ಸವ ನಡೆಯಲಿರುವದು.
