(ಬಸವಶಕ್ತಿ ಗೂಗಲ್ ಮೀಟ್ ಸರಣಿ ಉಪನ್ಯಾಸದ ವಿಡಿಯೋ)
ಶಿವಮೊಗ್ಗ
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.
ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.
ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಬಸವ ರೇಡಿಯೋ ಹೆಸರಾಂತ ಚಿಂತಕರನ್ನು ಆಹ್ವಾನಿಸಿ ಐದು ದಿನಗಳ ಚರ್ಚೆ ನಡೆಸಿತು.
ಹೆಸರಾಂತ ಚಿಂತಕ ಡಾ. ರಾಜೇಂದ್ರ ಚೆನ್ನಿ ಈ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಲಿಂಗಾಯತ ಹಿಂದೂ ಧರ್ಮದ ಭಾಗ ಎಂದು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಬಸವಣ್ಣ ಸಮಾಜ ಸುಧಾರಕ, ಹೊಸ ಧರ್ಮ ಆವಿಷ್ಕಾರ ಮಾಡಿಲ್ಲ, ವಚನ ಸಂಪ್ರದಾಯದ ಭಾಗ ಎಂದೆಲ್ಲಾ ಹೇಳಲಾಗುತ್ತಿದೆ.
ಈ ರೀತಿಯ ವಾದಗಳ ಉದ್ದೇಶವೇನು? ಇದನ್ನು ನಾವು ಪ್ರಶ್ನಿಸಬೇಕು.
ಈಗಿನ ರಾಜಕೀಯ ಶಕ್ತಿಗಳು ಹಿಂದೂ ಧರ್ಮವನ್ನ ಹೇಗೆ ವಿವರಿಸುತ್ತಿದ್ದಾರೆ ಎಂದೂ ಗಮನಿಸಬೇಕು. ಬಹುತ್ವವನ್ನು ಆಚೆಗಿಟ್ಟು ಕೆಲವದನ್ನೇ ಆಯ್ಕೆಮಾಡಿಕೊಂಡು ‘ಇದು ಮಾತ್ರ ಹಿಂದೂ’ ಅಂತ ಹೇಳಿದರೆ ಅದರೊಳಗೆ ಲಿಂಗಾಯತ ಸೇರಿಸಲು ಸಾಧ್ಯವೇ?
ಈ ಪ್ರಯತ್ನಗಳು ಗೊಂದಲ ಹುಟ್ಟಿಸಲು ಶುರುವಾದಾಗ ಲಿಂಗಾಯತ ಚಳುವಳಿ ಮತ್ತೆ ತೀವ್ರವಾಯಿತು.
ಈ ಹಿನ್ನಲೆಯಲ್ಲಿ ಲಿಂಗಾಯತದ ವಿಭಿನ್ನತೆ ಸಾಬೀತು ಪಡಿಸುವ ಪ್ರಯತ್ನ ನಡೆಯಬೇಕು.
ಜಾತಿ, ವರ್ಣ, ಲಿಂಗ ಭೇದಗಳನ್ನು ಅಮಾನವೀಯ ಎಂದು ತಿರಸ್ಕಾರ ಮಾಡಿ ಮನುಕುಲಕ್ಕೆ ದೊಡ್ಡ ಮಾರ್ಗದರ್ಶಿಯಾಗಿದ್ದು ಲಿಂಗಾಯತ. ಶ್ರಮಿಕರು ಅತಿ ಶೂದ್ರರು ಎನ್ನುತ್ತಿದ್ದಾಗ ಕಾಯಕವೇ ಕೈಲಾಸ ಎಂಬ ಕ್ರಾಂತಿಕಾರಿ ನಿಲುವು ತಳೆದಿದ್ದು ಲಿಂಗಾಯತ.
ಸನಾತನಿ ಚಿಂತನೆಯ ಬೆಂಬಲಿಗರು ಈ ಧ್ವನಿ ಹೊರಬರಬಾರದು ಎಂದು ನೋಡಿಕೊಳ್ಳುತ್ತಿದ್ದಾರೆ.
ಸಂವಿಧಾನದ ಹಾಗೂ ವಚನಕಾರರ ಮೌಲ್ಯಗಳು ಒಂದೇ ಆಗಿವೆ. ಸಂವಿದಾನದ ಮೌಲ್ಯಗಳನ್ನ ಲಿಂಗಾಯತ ಚಳುವಳಿ ಸುಭದ್ರಗೊಳಿಸುತ್ತಿದೆ. ಇದು ಸಿದ್ದರಾಮಯ್ಯನವರನ್ನ ಸೆಳೆಯಿತು. ಸಾಂಸ್ಕೃತಿಕ ನಾಯಕ ಎಂದು ಬಸವಣ್ಣವರನ್ನ ಘೋಷಿಸಿದ್ದು ಅವರ ಮಹತ್ವದ ಕಾರ್ಯ.
ಬಸವಣ್ಣ ಸಾಂಸ್ಕೃತಿಕ ವಲಯದಲ್ಲಿ ಮೂಲಭೂತವಾದ ಪಲ್ಲಟ ತಂದರು, ಹೊಸದಾಗಿ ನೋಡುವ, ಚಿಂತನೆಯ ರೀತಿ ತಂದರು,
ಬರೀ ವಿಚಾರಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಬದಲಾವಣೆಯನ್ನೂ ತಂದರು.
ಸಿದ್ದರಾಮಯ್ಯ ನಂತರ ಲಿಂಗಾಯತ ಚಳುವಳಿ ಶಕ್ತಿಗುಂದತ್ತಾ ಅಥವಾ ಬೆಳೆಯುತ್ತಾ ಎಂಬ ಪ್ರಶ್ನೆಯಿದೆ.
ಇಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ನೆಲೆಗಳನ್ನು ಗಟ್ಟಿಗೊಳಿಸಬೇಕಾದರೆ ರಾಜಕೀಯ ಮಾತ್ರ ಸಾಲದು, ನಮ್ಮ ಸಾಂಸ್ಕೃತಿಕ ನೆನಪುಗಳು ಮರುಕಳಿಸಬೇಕು. ಈ ಭಾವನೆ, ಚಿಂತನೆ ವಚನಕಾರರ ಚಳುವಳಿಯಲ್ಲಿ ಸಿಗತ್ತೆ.
ಲಿಂಗಾಯತ ಚಳುವಳಿಯ ಮೂಲ ಉದ್ದೇಶಗಳು ಈಗಿನ ಸಮಾಜಕ್ಕೆ ಅಗತ್ಯವಿದೆ. ನಾವು ನೋಡುತ್ತಿರುವ ದ್ವೇಷ, ಹಿಂಸೆ ನಾಗರೀಕತೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಎತ್ತುತ್ತಿದೆ. ಯೋಚನೆ ಮಾಡುವ ಶಕ್ತಿ ಕಳೆದುಕೊಂಡಿದ್ದೇವೆ.
ರಾಜಕೀಯಕ್ಕಿಂತಲೂ ಮನುಷ್ಯ ಪ್ರೇಮ, ಮನಪರಿವರ್ತನೆ ಅಗತ್ಯವಿದೆ.
ಇಡೀ ವಚನ ಪರಂಪರೆ ಕೇಳುವ ಪ್ರಶ್ನೆ ‘ನಾನು ಯಾರು’ ಎಂಬುದು. ಅಂತರಂಗ ಶುದ್ದಿ ಇಲ್ಲಿ ಒಂದು ಪದ ಮಾತ್ರವಲ್ಲ ಹೊರಗಣ ಜಗತ್ತನ್ನು, ಒಳಗಣ ಜಗತ್ತನ್ನು ಒಂದುಗೂಡಿಸುವ ಪ್ರಯತ್ನ. ಹೊರಗಣ ಪ್ರಪಂಚ ತಿದ್ದುವ ಮೊದಲು ನಮ್ಮನ್ನ ನಾವು ತಿದ್ದುಕೊಳ್ಳಬೇಕು ಎಂಬ ಕರೆ.
ನಾವು ಯಾಕೆ ಅಸಮಾನತೆ, ಸಾಮಾಜಿಕ ಅನ್ಯಾಯ, ಜಾತೀಯತೆಗಳಿಗೆ ಬಲಿಯಾಗಿದ್ದೇವೆ.
ಬಸವ, ಅಕ್ಕ, ಅಲ್ಲಮರ ನೆನಪು ಮಾಡಿಕೊಳ್ಳಬೇಕು. ಯಾವುದು ಸರಿ ಅನಿಸುದಿಲ್ಲವೋ ಅದನ್ನ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಬೇಕು.
ಲಿಂಗಾಯತ ಚಳುವಳಿ ಅಂತಹ ಚಳುವಳಿ ಆಗಬೇಕು. ಸಿದ್ದರಾಮಯ್ಯ ನಂತರವೂ ಇದು ಸಂಘಟಿತವಾಗಿ, ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಮುಂದುವರೆಸಬೇಕು.’
