ಇವ ನಮ್ಮವ ಎನ್ನಲಾಗದ ಸ್ಥಿತಿ ಬಂದಿದೆ: ಸಂಗನಾಳ ಚಲೋದಲ್ಲಿ ಸಾಣೇಹಳ್ಳಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

ಬಸವಣ್ಣ ಎಲ್ಲರನ್ನು ನಮ್ಮವರೆಂದು ಹೇಳಿದರು, ಆದರೆ ನಮ್ಮವರೆಂದು ಹೇಳಿಕೊಳ್ಳಲು ಆಗದೆ ಇರುವಂತ ಸ್ಥಿತಿ ನಿರ್ಮಾಣವಾಗಿದೆ. ಜಾತಿಯ ಗೋಡೆಗಳನ್ನು ನಮ್ಮೊಳಗೇ ಕಟ್ಟಿಕೊಳ್ಳುವ ಬದಲು ಸೇತುವೆಯನ್ನು ಕಟ್ಟುವ ತುರ್ತು ಕೆಲಸ ಆಗಬೇಕಿದೆ. ಆ ಸೇತುವೆಯನ್ನು ಕಟ್ಟಿದಾಗ ಎಲ್ಲರೂ ನೆಮ್ಮದಿಯಿಂದ ಬದುಕಲಿಕ್ಕೆ ಸಾಧ್ಯವಿದೆ ಎಂದು ಸಂಗನಾಳ ಚಲೋ ಸೌಹಾರ್ದ ಸಮಾವೇಶದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

ಕೊಪ್ಪಳ ಜಿಲ್ಲಾ ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ದಲಿತ ದಮನಿತರ ಮೇಲಿನ ದೌರ್ಜನ್ಯ ವಿರೋಧಿಸಿ ಸಂಗನಾಳ ದಲಿತ ಯುವಕ ಯಮನಪ್ಪನ ಕೊಲೆ ಖಂಡಿಸಿ, ಕೊಪ್ಪಳದಿಂದ ಸಂಗನಾಳ ಗ್ರಾಮಕ್ಕೆ ಜಾಥಾ ನಡೆಸಿ “ಸಮಾನ ಬದುಕಿನತ್ತ ಅರಿವಿನ ಜಾಥಾ ಸೌಹಾರ್ದ ಸಮಾವೇಶ”ದಲ್ಲಿ ಅವರು ಮಾತನಾಡಿದರು.

ಹುಟ್ಟುವಾಗ ನಾವು ಇಂತಹ ಜಾತಿಯಲ್ಲಿಯೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಬಂದಿಲ್ಲ. ಹುಟ್ಟಿದ ನಂತರ ನಮಗೊಂದು ಜಾತಿ ಅಂಟಿಕೊಳ್ಳುತ್ತದೆ. ಆದರೆ ಮನುಷ್ಯ ತನ್ನ ನೀತಿಯ ಮೂಲಕ ತನಗೆ ಅಂಟಿದ ಜಾತಿಯನ್ನು ಹೊಡೆದೋಡಿಸಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ನಮ್ಮ ಹಿಂದಿನ ಅನೇಕ ಶರಣರು, ಸಂತರು, ಸಾಧುಗಳನ್ನು ನೋಡಿದಾಗ ಅವರೆಲ್ಲ ಅತ್ಯಂತ ಕೆಳವರ್ಗದ ಜಾತಿಯಲ್ಲಿ ಹುಟ್ಟಿದವರು. ಆದರೆ ತಮ್ಮ ಸಾಧನೆಗಳ ಮೂಲಕ ಅತ್ಯಂತ ಶ್ರೇಷ್ಠ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಎಲ್ಲರ ಹುಟ್ಟಿನ ಗುಟ್ಟು ಒಂದೇ ರೀತಿ ಆಗಿರುವಾಗ, ಯಾಕೆ ಒಬ್ಬರನ್ನು ಕೀಳು, ಮತ್ತೊಂಬರನ್ನು ಮೇಲು ಎಂದು ಹೇಳುವಂತಹದ್ದು… ಮೇಲು ಕೀಳು ಆಗಬೇಕಾಗಿದ್ದು ಅವರವರ ನಡವಳಿಕೆಯಿಂದ, ಬದುಕಿನ ವಿಧಾನದಿಂದ, ಶ್ರೇಷ್ಠ ಜೀವನವನ್ನು ಸಾಗಿಸಿದರೆ ಅವನು ಮೇಲಾಗುತ್ತಾನೆ ಎಂದು ಹೇಳಿದರು.

ನಾವು ವಿಚಾರವಂತರಾಗಬೇಕು, ನೀತಿವಂತವರಾಗಬೇಕು, ವಿವೇಕಿಗಳಾಗಬೇಕು. ಯಾವಾಗಲೂ ಕೂಡ ಸೌಮ್ಯತೆಯಿಂದ, ಪ್ರೀತಿಯಿಂದ ಸಾಧನೆ ಮಾಡಲು ಸಾಧ್ಯ. ದ್ವೇಷ, ಅಸೂಹೆ, ಮತ್ಸರದಿಂದ ಮತ್ತಷ್ಟು ಮತ್ಸರವೇ ಹೆಚ್ಚಾಗುತ್ತದೆ ಎಂದು ಸಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಸವರಾಜ ಸೂಳಿಭಾವಿ ಪ್ರಾಸ್ತಾವಿಕ ಮಾತನಾಡಿ, ದೇವರ ಹೆಸರಿನಲ್ಲಿ ಶೋಷಣೆಗಳು, ದೌರ್ಜನ್ಯಗಳು ನಡೆಯುತ್ತಿವೆ. ನಮ್ಮೊಳಗೇ ಇರುವ ಇಂತಹವುಗಳನ್ನು ಬಿಟ್ಟು ಬಸವಣ್ಣ ಹೇಳಿರುವುದು, ಅರಿವೇ ದೇವರು ಎಂದು. ಒಬ್ಬರಿಗಿಂತ ಒಬ್ಬರನ್ನು ಕೀಳಾಗಿ ಕಾಣುವ ಸಿದ್ಧಾಂತವೇ ವೈದಿಕ ಸಿದ್ಧಾಂತ. ಇದರ ವಿರುದ್ದ ಎದ್ದು ನಿಲ್ಲಬೇಕಿದೆ. ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಮ್ಮ ಮನಸ್ಸಿನ ಅಡ್ಡ ಗೋಡೆಗಳನ್ನು ಕೆಡವಬೇಕು. ಬಸವಣ್ಣನವರ ವಿಚಾರಗಳನ್ನು ನಮ್ಮೊಳಗೇ ಇಳಿಸಿಕೊಳ್ಳಬೇಕು ಎಂದರು.

ನಾವು ಈ ಊರಿಗೆ ಯಾರನ್ನೂ ಬೊಟ್ಟು ಮಾಡಿ ತೋರಿಸಲಿಕ್ಕೆ ಬಂದಿರುವುದಿಲ್ಲ. ನಮ್ಮೊಳಗಿನ ಬೆಳಕನ್ನು ತೆರೆಯಲಿಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಕೊಪ್ಪಳದಲ್ಲಿ ವರ್ಷಕ್ಕೆ ಆರವತನಾಲ್ಕು, ಅಂದರೆ ವಾರಕ್ಕೆ ಒಂದರಂತೆ ದೌರ್ಜನ್ಯಗಳು ನಡೆದಿರುವುದು ದಾಖಲಾದ ಪ್ರಕರಣಗಳು. ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನೆ ಕೇಳುವುದರ ಮೂಲಕ ದೌರ್ಜನ್ಯಗಳನ್ನು ತಡೆಗಟ್ಟಬೇಕಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಬಿ.ಫೀರಬಾಷಾ, ಟಿ ರತ್ನಾಕರ್, ಚಂದ್ರಶೇಖರ ಗೊರಬಾಳ, ಅನಿಲ ಹೊಸಮನಿ, ಮುತ್ತು ಬಿಳೆಯಲಿ, ಆನಂದ ಶಿಂಗಾಡಿ, ಶ್ರೀಧರ್ ಭಟ್, ಡಿ.ಎಚ್. ಪೂಜಾರ, ಹನುಮೇಶ ಕಲ್ಮಂಗಿ, ಗವಿಸಿದ್ದಪ್ಪ ಪಲ್ಲೇದ, ಬಸವಲಿಂಗಪ್ಪ ದಾವಣಗೆರೆ, ಇಂದಿರಾ ಕೃಷ್ಣಪ್ಪ, ಅನಗವಾಡಿ ನಿಂಗಪ್ಪ, ನಿತೀನ್ ಕುಮಾರ್, ಗ್ರಾಮ ಪಂಚಾಯತ ಸದಸ್ಯರು, ಹೋರಾಟಗಾರರು ಉಪಸ್ಥಿತರಿದ್ದರು.

Share This Article
2 Comments

Leave a Reply

Your email address will not be published. Required fields are marked *