ಹುಬ್ಬಳ್ಳಿ:
ವಚನ ಶ್ರಾವಣದ ಅಂಗವಾಗಿ ಭಾನುವಾರ ಗಂಟಿಕೇರಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗಾಗಿ ಶ್ರಾವಣ ಮಾಸದ ಇಷ್ಟಲಿಂಗ ಪೂಜೆ ಹಾಗೂ ಸಹಜ ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.
ಮಕ್ಕಳಲ್ಲಿ ಬಸವತತ್ವ, ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಉದ್ಧೇಶದಿಂದ, ಇಷ್ಟಲಿಂಗ ಪೂಜೆಯ ಮೂಲಕ ಬಾಲಮನಗಳಲ್ಲಿ ಬಸವತತ್ವದ ಬೀಜ ಬಿತ್ತುವ ಹಾಗೂ ಶರಣ ಸಂಸ್ಕೃತಿಯ ಮೌಲ್ಯಗಳನ್ನು ಪರಿಚಯಿಸುವ ಸಾರ್ಥಕ ಪ್ರಯತ್ನ ನಡೆಯಿತು.

ಶ್ರೀಗುರು ಬಸವ ಮಂಟಪದ ಶೋಭಾತಾಯಿ ಸಾದರಹಳ್ಳಿ ಹಾಗೂ ಶಾರದಾತಾಯಿ ಪಾಟೀಲ ಅವರು ಮಕ್ಕಳಿಗೆ ಇಷ್ಟಲಿಂಗ ಪೂಜೆ ಮತ್ತು ಸಹಜ ಶಿವಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು, ಅದರ ಮಹತ್ವವನ್ನು ಸರಳವಾಗಿ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳ, ಬಸವೇಶ್ವರ ಭಜನಾ ಮಂಡಳ ಹಾಗೂ ಬಸವೇಶ್ವರ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದು, ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗಾಗಿ ರಾಜು ಕುಸುಗಲ್ ಅವರು ಪ್ರಸಾದ ದಾಸೋಹದ ವ್ಯವಸ್ಥೆ ಏರ್ಪಡಿಸಿದ್ದರು.
ಮಕ್ಕಳಲ್ಲಿ ಬಸವತತ್ವದ ಅರಿವು ಮೂಡಿಸಿ, ಶರಣ ಸಂಸ್ಕೃತಿಯತ್ತ ಅವರನ್ನು ಕರೆದೊಯ್ಯುವ ಈ ಕಾರ್ಯಕ್ರಮವು ವಚನ ಶ್ರಾವಣಕ್ಕೆ ಮತ್ತಷ್ಟು ಅರ್ಥಪೂರ್ಣತೆಯನ್ನು ತಂದುಕೊಟ್ಟಿತು ಎನ್ನಬಹುದು.
