ಕಂಬಿ ಇಲ್ಲದೆ ರೈಲು ಬಿಡುವ ಕನ್ನೇರಿ ಸ್ವಾಮಿ 3

ನಾಗನೂರು ಸ್ವಾಮೀಜಿ ಅನುವಾದ ಮಾಡಿದ್ದು ಕುರಾನ್ ಅಲ್ಲ ವಿನೋಬಾ ಭಾವೆ ಕೃತಿಗಳನ್ನು

ರಬಕವಿ ಬನಹಟ್ಟಿ

ಬನಹಟ್ಟಿಯ ಕಾರ್ಯಕ್ರಮವೊಂದರಲ್ಲಿ ಶನಿವಾರ ಕನ್ನೇರಿ ಸ್ವಾಮಿ ‘ನಾಗನೂರು ಮಠದ ಸ್ವಾಮೀಜಿ ಕುರಾನ್ ಅನುವಾದ ಮಾಡಿದ್ದಾರೆ’ ಎಂದು ಹೇಳಿರುವುದು ಅಪ್ಪಟ ಅಜ್ಞಾನದ ಪರಮಾವಧಿಗೆ ನಿದರ್ಶನವಾಗಿದೆ.

ನಾಗನೂರು ಸ್ವಾಮೀಜಿ ಯಾವುದೇ ಭಾಷೆಯ ಕುರಾನ್ ಗ್ರಂಥವನ್ನು ಅನುವಾದ ಮಾಡಿಲ್ಲ. ಜನರಲ್ಲಿ ಇಂತಹ ಹಸಿ ಸುಳ್ಳುಗಳನ್ನು ಹೇಳಿ, ಹಿಂದೂ ಧರ್ಮದ ಯುವಕರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕನ್ನೇರಿ ಸ್ವಾಮಿಯ ದುಷ್ಟಬುದ್ಧಿಗೆ ಏನು ಹೇಳಬೇಕೋ ತಿಳಿಯದು.

ನಾಗನೂರು ಸ್ವಾಮೀಜಿ ಅನುವಾದ ಮಾಡಿದ್ದು ಸಂತ ವಿನೋಬಾ ಭಾವೆ ಅವರ ಕೃತಿಗಳನ್ನು. ಪವನಾರ ಆಶ್ರಮದಲ್ಲಿದ್ದ ಚನ್ನಮ್ಮ ಹಳ್ಳಿಕೇರಿ ಅವರು ಶ್ರೀಗಳ ಸನ್ನಿಧಿಗೆ ಬಂದು ಸಂತ ವಿನೋಬಾ ಭಾವೆ ಅವರ ಸಾಹಿತ್ಯ ಒಂದಿಷ್ಟು ಕನ್ನಡಕ್ಕೆ ಬರಬೇಕಾಗಿದೆ. ಹಿಂದಿ ಭಾಷೆಯಲ್ಲಿ ಪ್ರಭುತ್ವ ಇರುವ ತಾವು ಒಂದಿಷ್ಟು ಅನುವಾದ ಮಾಡಿಕೊಡಿ ಎಂದು ವಿನಂತಿಸಿಕೊಂಡಿದ್ದರು.

ಅವರ ವಿನಂತಿ ಮನ್ನಿಸಿ ಪೂಜ್ಯ ಸ್ವಾಮೀಜಿ ‘ಭಕ್ತಿದರ್ಶನ’ ಎಂಬ ಕೃತಿಯನ್ನು ಅನುವಾದ ಮಾಡಿಕೊಟ್ಟರು. ಅದು ತುಂಬ ಜನಪ್ರಿಯವಾಯಿತು. ನಂತರ ವಿನೋಬಾ ಅವರ ‘ಧರ್ಮಾಮೃತ’ ಎಂಬ ಕೃತಿಯನ್ನು ಅನುವಾದ ಮಾಡಿದ್ದರು. ಈ ಕೃತಿಯ ಮೌಲಿಕತೆಯನ್ನು ಗಮನಿಸಿ ನಮ್ಮ ನಾಡಿನ ಖ್ಯಾತ ವಿದ್ವಾಂಸರಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ತಮ್ಮ ಅನನ್ಯ ಪ್ರಕಾಶನದ ಮೂಲಕ ಪ್ರಕಟಿಸಿದರು.

ಧರ್ಮಾಮೃತ ಕೃತಿಯಲ್ಲಿ ವಿನೋಬಾ ಅವರು ಹಿಂದೂ ಧರ್ಮದ ವೈಶಿಷ್ಟ್ಯಗಳನ್ನೇ ಸಾರಿದ್ದಾರೆ. ಇದು ಕನೇರಿ ಸ್ವಾಮಿಗಳ ಕಣ್ಣಿಗೆ ಕಾಣುವುದಿಲ್ಲವೆಂದು ತೋರುತ್ತದೆ. ಕೊನೆಯಲ್ಲಿ ವಿನೋಬಾ ಅವರ ‘ಇಸ್ಲಾಂ ಧರ್ಮದ ಸಂದೇಶ’ ಎಂಬ ಕೃತಿಯನ್ನು ಶ್ರೀಗಳು ಅನುವಾದಿಸಿದರು.

ಇನ್ನೂ ಒಂದು ಆಶ್ಚರ್ಯದ ಸಂಗತಿಯೆಂದರೆ- ಈ ಕೃತಿಯನ್ನು ಕನ್ನೇರಿ ಸ್ವಾಮಿಯ ಪರಮಾರಾಧ್ಯ ಗುರುಗಳಾದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರೇ ಬೆಳಗಾವಿಯಲ್ಲಿ ಲೋಕಾರ್ಪಣೆ ಮಾಡಿದ್ದರು. ಇದು ಅವರಿಗೆ ಗೊತ್ತಿರುವ ಸಂಗತಿಯೇ. ಹೀಗಿದ್ದೂ ಹಿಂದೂ ಯುವಕರ ಮನಸ್ಸನ್ನು ಕೆಡಿಸುವ ಹುಚ್ಚಾಟಕ್ಕೆ ನಾಗನೂರು ಸ್ವಾಮೀಜಿ ಕುರಾನ್ ಅನುವಾದಿಸಿ ಹಂಚಿದ್ದಾರೆ ಎಂದು ಹಸಿ ಸುಳ್ಳನ್ನು ಹೇಳಿರುವುದು ಅವರ ದುಷ್ಟ ಮನಸ್ಥಿತಿಗೆ ಹಿಡಿದ ಕನ್ನಡಿ ಎನ್ನಬೇಕು.

ನಾಗನೂರು ಸ್ವಾಮೀಜಿ ಭಾರತೀಯ ತತ್ವಶಾಸ್ತ್ರ ಎಂಬ ಹಿಂದೂ ಧರ್ಮದ ಭಾಗದಲ್ಲಿಯೇ ಬರುವ ಸಮಸ್ತ ಷಡ್ದರ್ಶನಗಳ ಸಮಗ್ರ ಅವಲೋಕನ ಕೃತಿಯನ್ನು ಅನುವಾದ ಮಾಡಿದ್ದಾರೆ. ಈ ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿಯೂ ಲಭಿಸಿದೆ. ಹಿಂದೂ ಧರ್ಮದ ಅಪೂರ್ವ ಚಿಂತಕರಾದ ಸೂರ್ಯಪ್ರಕಾಶ ಪಂಡಿತ ಅವರೇ ಈ ಕೃತಿಯ ವೈಶಿಷ್ಟ್ಯ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ಒಂದು ಸುದೀರ್ಘ ಲೇಖನವನ್ನೂ ಬರೆದಿದ್ದಾರೆ. ಇದು ಕನ್ನೇರಿ ಸ್ವಾಮಿಗೆ ಕಾಣುವುದಿಲ್ಲ.

ಕನ್ನೇರಿ ಸ್ವಾಮಿ ಇಂತಹ ಹಸಿಸುಳ್ಳುಗಳನ್ನು ಹೇಳುವುದನ್ನು ಬಿಟ್ಟು, ನಿಜವಾದ ಹಿಂದೂ ಧರ್ಮದ ತತ್ವಗಳನ್ನು ಯುವ ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಲಿ, ಕೋಮು ಭಾವನೆಯ ಕಿಚ್ಚಿನಲ್ಲಿ ಮೈ ಕಾಯಿಸಿಕೊಳ್ಳುವ ಮನೋಸ್ಥಿತಿಯಿಂದ ಹೊರಬರಲಿ ಎಂದು ಆಶಿಸುವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *