ಬೆಳಗಾವಿ :
ವಿಶ್ವಗುರು ಬಸವಣ್ಣವರು ಕನ್ನಡ ನಾಡಿನ ಮಹಾನ್ ಸಾಮಾಜ ಸುಧಾರಕರು. ಆಧ್ಯಾತ್ಮಿಕ ಗುರು ಮತ್ತು ವಚನಕಾರ. ಅವರು ವಚನಗಳ ಮೂಲಕ ಜೀವನದ ಮೌಲ್ಯಗಳಾದ ಸಮಾನತೆಯ ತತ್ವ ಸಾರಿ ಜಾತಿ, ಲಿಂಗ, ವರ್ಣ ಭೇದಗಳನ್ನು ಖಂಡಿಸಿದರು. ಎಲ್ಲರೂ ಸಮಾನರು ಎಂಬ ನೀತಿ ತಿಳಿಸಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದರು.
ಕೆಲಸವೇ ದೇವರು, ಯಾವ ಕೆಲಸವೂ ಚಿಕ್ಕದಲ್ಲ, ದೊಡ್ಡದಲ್ಲ ಎಂದು ಕಾಯಕವೇ ಕೈಲಾಸ ಎಂದು ಕರೆದರು. ಅನ್ನ, ದಾನ, ಜ್ಞಾನ ದಾಸೋಹ ಮೂಲಕ ಸಮಾಜಸೇವೆ ಮಾಡಲು ಕರೆ ನೀಡಿದರು.
ದಯವೇ ಧರ್ಮದ ಮೂಲವೆಂದು ಧರ್ಮದ ನಿಜ ಅರ್ಥ ತಿಳಿಸಿ, ವಿಶ್ವವನ್ನು ಸುಂದರ ಹೂದೋಟ ಮಾಡಿದ ಕೀರ್ತಿ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ.
ಅವರ ವಚನಗಳಲ್ಲಿಯ ನೈತಿಕ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಿಸಬೇಕಿದೆ ಎಂದು ಸಾಹಿತಿ ಮತ್ತು ವಿಮರ್ಶಕ ಪ್ರೊ. ಎಫ್.ಡಿ. ಗಡ್ಡಿಗೌಡರ ಹೇಳಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಹಾಗೂ ಜಿಲ್ಲಾ ಘಟಕಗಳು, ಕರ್ನಾಟಕ ರಾಜ್ಯ ಸರ್ಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೆಳಗಾವಿ ಇವರ ಸಂಯೋಗದಲ್ಲಿ ವಿಶ್ವಗುರು ಶ್ರೀ ಬಸವೇಶ್ವರ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಈಚೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೋಹನಗೌಡ ಪಾಟೀಲ ಮಾಜಿ ಕಸಾಪ ಅಧ್ಯಕ್ಷರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಎಲೆಮರೆಯ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವುದು ಶ್ಲಾಘನೀಯ ಕಾಯ೯ ಎಂದರು.
ಇದೇ ಸಂದರ್ಭದಲ್ಲಿ ಪ್ರೊ. ಎಫ್. ಡಿ. ಗಡ್ಡಿಗೌಡರ ವಿರಚಿತ ವಿಶ್ವಗುರು ಬಸವಾ ನೀನೇ ಬೇಕು ಬಸವಾ ಎಂಬ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಗೀತಾ ಸು. ಬಸ್ತವಾಡ ಅವರ ಗೀತಗುಚ್ಛ ಕವನ ಸಂಕಲನಕ್ಕೆ ಪುಸ್ತಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ದಾನಮ್ಮಾ ಝಳಕಿ ಕ್ಷೇತ್ರ ಸಮನ್ವಯಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯಅತಿಥಿಗಳಾಗಿ ಕಲ್ಪವೃಕ್ಷ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎಂ. ವೈ. ಮೆಣಸಿನಕಾಯಿ, ಡಾ ಹೇಮಾ ಸೊನಳ್ಳಿ, ಪೃಥ್ವಿ ಪೌಂಡೆಶನ್ನ ರಜನಿ ಜಿರಿಗ್ಯಾಳ, ಸುಮಾ ದೊಡಮನಿ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಬರಹಗಾರರ ಸಂಘದ ಗಂಗಾಧರ ಬಡಿಗೇರ, ನದಾಫ, ಗಾಣಗಿ, ಹರ್ಷಾರಾಣಿ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.

ಮಹೇಶ ನಿಲಜಿ, ಬಸವರಾಜ ಮೇದಾರ, ರುದ್ರೇಶ ಬಡಿಗೇರ, ನಿಂಗಪ್ಪ ಕೌಜಲಗಿ, ಗಂಗಾಧರ ಬಡೀಗೇರ, ಡಿ.ಡಿ. ಹೊಳಿ, ಪ್ರವೀಣ ಪಾಳೇಕರ, ಎ.ಬಿ. ಮಡಿವಾಳರ, ಪ್ರಕಾಶ ಬಾಗೇವಾಡಿ, ರಮೇಶ ಬಾಗೇವಾಡಿ, ಮಹಾದೇವ ನಿಚ್ಚಣಕಿ ಉಪಸ್ಥಿತರಿದ್ದರು.
ಸುರೇಶ ಸಕ್ರಣ್ಣವರ ಸ್ವಾಗತ, ಮಹಾದೇವಿ ಪಾಟೀಲ ನಿರೂಪಣೆ, ಶಿವಾನಂದ ತಲ್ಲೂರ ವಂದಿಸಿದರು.
