ಲಿಂಗಾಯತ ಧರ್ಮದ ಬಗ್ಗೆ ಅಭಿಪ್ರಾಯ ರೂಪಿಸುವುದು ಹೇಗೆ?
ಹೊಸಪೇಟೆ
ಜನಸಾಮಾನ್ಯರಲ್ಲಿ, ಮಾಧ್ಯಮಗಳಲ್ಲಿ, ರಾಜಕಾರಣಿಗಳಲ್ಲಿ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟದ ಬಗ್ಗೆ ಸೂಕ್ತವಾದ ಅಭಿಪ್ರಾಯ ರೂಪಿಸುವ ಮಾರ್ಗಗಳ ಬಗ್ಗೆ ಚಿಂತನೆಯಾಗಬೇಕು.
ಹೊಸಪೇಟೆಯ ಬಸವಶಕ್ತಿ ಶಿಬಿರದಲ್ಲಿ ಈ ವಿಷಯದ ಮೇಲೆ ನಾನು ಹಂಚಿಕೊಂಡ ಕೆಲ ಅನಿಸಿಕೆಗಳು:
1) ಬಸವ ತತ್ವವನ್ನು ನಿರೂಪಿಸಲು ನಮಗೆ ವಚನಗಳೇ ಆಧಾರ. ವಚನಗಳಲ್ಲಿನ ಸಮಗ್ರ ಭಾವವನ್ನು ನಿರೂಪಿಸದೆ ಕೇವಲ ಒಂದು ವಚನ ತೆಗೆದುಕೊಂಡು ಮನಸ್ಸಿಗೆ ಬಂದಂತೆ ಮಾತಾಡಬಾರದು.
2) ವಚನಗಳಲ್ಲಿ ಭಕ್ತಿಯೂ ಇದೆ ವೈಚಾರಿಕತೆಯೂ ಇದೆ. ಭಕ್ತಿಯನ್ನು ಹೇಳದೆ ಕೇವಲ ವೈಚಾರಿಕತೆಯ ಮಾತುಗಳನ್ನು ಮಾತ್ರ ಹೇಳಿದ ಪರಿಣಾಮ ಸ್ವೇಚ್ಚೆಯ ಮಾತುಗಳೇ ವಿರೋಧಿಗಳಿಗೆ ಸರಕು ಒದಗಿಸುತ್ತವೆ.
3) ಭಕ್ತಿಯಿಲ್ಲದ ವೈಚಾರಿಕತೆ ಸ್ವೇಚ್ಚೆ, ವೈಚಾರಿಕತೆ ಇಲ್ಲದ ಭಕ್ತಿ ಮೌಢ್ಯ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡು ಶರಣ ತತ್ವಗಳನ್ನು ವಿಸ್ತರಿಸಬೇಕು.
4) ಭಾರತದಲ್ಲಿನ ಸ್ಥಾವರ ಪೂಜೆಗಳ ವಿಧಾನವನ್ನು ವಚನಗಳಲ್ಲಿ ಶರಣರು ಅವುಗಳನ್ನು ಅಲ್ಲಗಳೆದಿದ್ದರೂ, ಅವು ಷಟಸ್ಥಲದ ಎರಡನೇ ಹಂತದ ಮಹೇಶ ಸ್ಥಳದಲ್ಲಿ ಲಭ್ಯ ಆಗುತ್ತವೆ.
ಭಕ್ತರೇ ಆಗದಿರುವ ಸಾರ್ವಜನಿಕರ ಮುಂದೆ ಸ್ಥಾವರ ದೇವತೆಗಳನ್ನು ಅಲ್ಲಗಳೆದರೆ ಅವರ ನಂಬಿಕೆಯ ಭಾವಕ್ಕೆ ಧಕ್ಕೆ ಉಂಟಾಗಿ, ಅವರು ನಮ್ಮ ಸಮೀಪವೇ ಬರುವದಿಲ್ಲ.
ಈ ಕಾರಣದಿಂದಲೇ ಬಸವಭಕ್ತರ ಕಾರ್ಯಕ್ರಮಗಳೆಂದರೆ ಅವರು ದೇವರನ್ನು ಬಯ್ಯುವವರು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಗಟ್ಟಿಗೊಂಡಿದೆ.
5) ವಚನ ತತ್ವಗಳಲ್ಲಿನ ಭಕ್ತಿಯ ನೆಲೆಯನ್ನು ಕಡೆಗಣಿಸಲಾಗಿದೆ. ಪ್ರತಿ ಮಾನವನಲ್ಲಿ ಭಕ್ತಿಯ ಸೆಲೆ ಇರುವುದರಿಂದ, ಅದನ್ನು ಹೊರತು ಪಡಿಸಿದ ಯಾವುದೇ ಮಾತುಗಳು ಜನಮಾನಸಕ್ಕೆ ತಲುಪುವದಿಲ್ಲ.
6) ನಂಜನಗೂಡಿನ ಲಿಂಗಾಯತ ಮಠಾಧೀಶರ ಹತ್ಯೆಯಂತಹ ವಿಷಯಗಳು ಲಿಂಗಾಯತ ಸಮುದಾಯಕ್ಕೆ ಗೊತ್ತೆ ಇಲ್ಲ. ಆದನ್ನು ನೆನಪಿಸುವದು ನಮ್ಮ ಕರ್ತವ್ಯ.
7) 1871 ರ ಜನಗಣತಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಆಗಿತ್ತು ಎನ್ನುವದು ಸಹ ಬಹುತೇಕರಿಗೆ ಗೊತ್ತಿಲ್ಲ. ವೈದಿಕರು ಹಬ್ಬಗಳ ಆಚರಣೆಯಲ್ಲಿ ತಮ್ಮ ಸಿದ್ಧಾಂತಗಳನ್ನು ತೋರಿಸಿದಂತೆ, ನಾವು ಸಹ ಒಂದು ದಿನವನ್ನು ಸ್ವತಂತ್ರ ಧರ್ಮ ಆಚರಣಾ ದಿನವನ್ನಾಗಿ ಮಾಡಬೇಕಾಗಿದೆ.

ಒಳ್ಳೆಯ ಅಭಿಪ್ರಾಯ
ಲಿಂಗಾಯತ ಎಲ್ಲವಿಚಾರ ಎಲ್ಲರಿಗೂ ಒಪ್ಪಿಗೆ ಆದ ವಚನ ಧರ್ಮ. ಇನ್ನೊಬ್ಬರ ತೇಗಳಿ ನಾವು ಸಣ್ಣವರಾಗದೆ ನಮ್ಮ ಧರ್ಮ ಎತ್ತಿ ಹಿಡಿದು ಬಸವ ಬೆಳಕು ಬೆಳ್ಗಿಸಬೇಕು. ಧನ್ಯವಾದಗಳು 💐ಶರಣು 👏🏻👏🏻