ನೆಲಮಂಗಲ
ಹನ್ನೆರಡನೆಯ ಶತಮಾನದಲ್ಲಿ ಉದಯವಾದ ವಚನಗಳ ಉಳಿವಿಗಾಗಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಸ್ರೋ ವಿಶ್ರಾಂತ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು.
ನಗರದ ಬಸವಣ್ಣದೇವರ ಮಠದ ಆವರಣದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬಸವ ಜಯಂತಿ ಉತ್ಸವ ಹಾಗೂ ಪವಾಡ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.


ಭೂಮಿ ಬಿಟ್ಟು ಚಂದ್ರನ ಅಂಗಳಕ್ಕೆ ಹೋಗುವ ಕಾಲ ಬಂದರೂ ಬಸವಣ್ಣನವರ ವಿಚಾರಗಳು ಪ್ರಸ್ತುತ ಬೇಕಾಗಿರುವ ಅನಿವಾರ್ಯತೆ ಇದೆ.
ಬಸವಣ್ಣನವರು ಯಾವ ರೀತಿ ಹರಳಯ್ಯ, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯನನ್ನು ಅಪ್ಪಿಕೊಂಡರೋ ಅದೇ ರೀತಿ ಸಮಾಜದಲ್ಲಿ ಶೋಷಣೆ ಮತ್ತು ತುಳಿತಕ್ಕೆ ಒಳಗಾದವರನ್ನು ನಾವು ನೀವೆಲ್ಲರೂ ಅಪ್ಪಿಕೊಂಡು ನಮ್ಮ ಜತೆ ಕರೆದುಕೊಂಡು ಹೋಗುವ ಜವಾಬ್ದಾರಿ ಇದೆ.
ಬಸವಣ್ಣನವರ ವಿಚಾರದಂತೆ ಪವಾಡ ಬಸವಣ್ಣ ದೇವರ ಮಠ ಸಾಮರಸ್ಯದ ಅಮೃತವನ್ನು ನೀಡುವ ಮೂಲಕ ಸಮಾಜದ ಬದಲಾವಣೆಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.


ಶ್ರೀ ಮಠ ನೀಡುವ 2026ರ ಪವಾಡ ಶ್ರೀ ಪ್ರಶಸ್ತಿಯನ್ನು ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಗಣ್ಯರು ನೀಡಿ ಅಭಿನಂದಿಸಿದರು.
ಪ್ರಶಸ್ತಿ ಪಡೆದ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ನಾನು ಕಲಬುರಗಿಯವಳಾಗಿದ್ದು, ಅಲ್ಲಿ ಗಲ್ಲಿಗಲ್ಲಿಯಲ್ಲಿ ವಚನಗಳ ಸದ್ದು ಇದೆ.
ಬಸವಣ್ಣದೇವರ ಮಠದ ಶ್ರೀಗಳ ಪರಿಶ್ರಮದಿಂದ ಅದ್ದೂರಿ ಸಮಾರಂಭ ಮಾದರಿಯಾಗಿದೆ. ಅಣ್ಣನ ಆದರ್ಶದಲ್ಲಿ ಬದುಕಿದ ನನಗೆ ಪವಾಡ ಶ್ರೀ ಪ್ರಶಸ್ತಿ ಸಿಕ್ಕಿರುವುದು ಸಂತೋಷವಾಗಿದೆ ಎಂದರು.


ಬಸವಣ್ಣದೇವರ ಮಠ ನಗರ ಹೃದಯಭಾಗದಲ್ಲಿರುವುದು ಮಾತ್ರವಲ್ಲ ತಾಲೂಕಿಗೆ ಹೃದಯವಾಗಿರುವುದು ಮರೆಯುವಂತಿಲ್ಲ. ಶ್ರೀ ಮಠದ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ.
ಬಸವಣ್ಣನವರ ವಿಚಾರಗಳು ಸಮಾಜಕ್ಕೆ ಮಾದರಿ, ಅವರ ಸಂದೇಶಗಳನ್ನು ಜಗತ್ತಿಗೆ ತಿಳಿಸುತ್ತಿರುವುದು ಸಂತೋಷವಾಗಿದೆ. ಮಠಕ್ಕೆ ಕ್ಷೇತ್ರದ ಶಾಸಕನಾಗಿ ಅಲ್ಲ ಭಕ್ತನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ. ಶ್ರೀಗಳ ಆಶೀರ್ವಾದ ಸದಾಕಾಲ ಇರಲಿ, ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ರಥೋತ್ಸವ
ಕ್ಷೇತ್ರಾಧಿಪತಿ ಶ್ರೀ ಪವಾಡ ಬಸವಣ್ಣದೇವರ ರಥೋತ್ಸವವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಸಲಾಯಿತು. ರಥೋತ್ಸವಕ್ಕೆ ವೀರ ಗಾಸೆ, ಗೊಂಬೆಕುಣಿತ, ಕೇರಳ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ತಂದವು. ಸಾವಿರಾರು ಭಕ್ತರು ಭಾಗವಹಿಸಿದ್ದರು.


ಬಸವಣ್ಣನವರ ಜಯಂತಿಯಲ್ಲಿ ಬಸವ ವಚನಾಮೃತ ಕೃತಿ, ಅಕ್ಕನ ವಚನಾಮೃತ ಕೃತಿ, ಬೆನಿಫಿಷಿಯಲ್ ಬೀಡ್ಸ್, ಶಿವಾಷ್ಟೋತ್ತರತವನಿಧಿ ಕೃತಿ, ಬಾಲಚಂದ್ರ ರಚಿತ ಯುಗಾವತಾರಿಯ ಅಮರ ಸಂದೇಶಗಳು ಕೃತಿ ಹಾಗೂ ದೇವಮಾನವನ ದಿವ್ಯ ಸಂದೇಶಗಳು ಎಂಬ ಕೃತಿಗಳನ್ನು ವಿವಿಧ ಗಣ್ಯರು, ಶ್ರೀಗಳು ಲೋಕಾರ್ಪಣೆ ಗೊಳಿಸಿದರು.
ಶಿವಸಂಚಾರ ನಾಟಕೋತ್ಸವ
ಬಸವಣ್ಣದೇವರ ಮಠದಲ್ಲಿ ಏ.18ರಿಂದ ಶಿವಯೋಗಿ ಸಿದ್ದರಾಮೇಶ್ವರ, ಕಳ್ಳರ ಸಂತೆ, ಜಂಗಮದೆಡೆಗೆ ఎంబ ಮೂರು ನಾಟಕಗಳನ್ನು ಶಿವಸಂಚಾರ ನಾಟಕೋತ್ಸವದ ಮೂಲಕ ಪ್ರಸ್ತುತ ಪಡಿಸಲಾಗಿದ್ದು ಸಾವಿರಾರು ಕಲಾವಿದರು, ಭಕ್ತರು ವೀಕ್ಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಚಾರ್ಯ ಮಹಾಸ್ವಾಮಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸೋಮಶೇಖರ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಯೋಜಿ ರಾವ್, ಮಾಜಿ ಶಾಸಕ ಎಂ.ಪಿ. ನಾಗರಾಜು, ಎನ್ಪಿಎ ಅಧ್ಯಕ್ಷ ಎಂ.ಕೆ. ನಾಗರಾಜು, ಮಾಜಿ ಅಧ್ಯಕ್ಷ ಮಲ್ಲಯ್ಯ, ನಗರಸಭೆ ಅಧ್ಯಕ್ಷ ಎನ್. ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ, ಪ್ರದೀಪ್, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಬಿಜೆಪಿ ನಗರಸಭೆ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪೂರ್ಣಿಮಾ ಸುಗ್ಗರಾಜು, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಬಸವರಾಜು, ವೀರಶೈವ ಸಂಘದ ಅಧ್ಯಕ್ಷ ರಾಜಶೇಖರ್, ಯುವ ಟ್ರಸ್ಟ್ನ ಪುನೀತ್ ಮತ್ತು ಅನೇಕ ಮುಖಂಡರಿದ್ದರು.
