ಬಸವಣ್ಣದೇವರ ಮಠದ ವಚನ ಕಂಠಪಾಠ ಸ್ಪರ್ಧೆ ವಿಜೇತರ ಮೆರವಣಿಗೆ
ನೆಲಮಂಗಲ
ನಗರದ ಪವಾಡ ಬಸವಣ್ಣದೇವರ ಮಠದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಭಿನಂದನೆ ಸಲ್ಲಿಸಿ ನಗದು ಬಹುಮಾನ ನೀಡಲಾಯಿತು.
ಬಸವಣ್ಣ ದೇವರಮಠದಲ್ಲಿ ಬಸವ ಜಯಂತಿಯ ಅಂಗವಾಗಿ ನಡೆದ ವಚನಕಂಠ ಪಾಠ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಜನರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾಗವಹಿಸಿದ್ದರು.

ಬಸವಣ್ಣದೇವರಮಠ ಪ್ರಖ್ಯಾತ ವಚನಕಂಠ ಪಾಠ ಸ್ಪರ್ಧೆಯಲ್ಲಿ ನಿರಂತರವಾಗಿ 1420 ವಚನಗಳನ್ನು ಹೇಳಿದ ಹಾಸನ ಜಿಲ್ಲೆಯ ಬೇಲೂರಿನ ನೀಲಾ ನಾಗಭೂಷಣ್ ಅವರಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು 1 ಲಕ್ಷ ಬಹುಮಾನ ನೀಡಿ ಗೌರವಿಸಿದರು.
ಕಲಬುರಗಿಯ ಚಿಮ್ಮನ್ ಚೂಡ್ ನ ಜಗದೀಶ್ ಮರಪಳ್ಳಿ 870 ವಚನಗಳನ್ನು ಹೇಳುವ ಮೂಲಕ 2ನೇ ಸ್ಥಾನ ಪಡೆದು 75 ಸಾವಿರ ರೂ. ಪಡೆದರೆ, ಬೆಳಗಾವಿಯ ರಾಯಭಾಗದ ಲತಾ ಶಿವಾನಂದ ಪಾಟೀಲ್ 852 ವಚನಗಳನ್ನು ಹೇಳುವ ಮೂಲಕ ತೃತೀಯ ಸ್ಥಾನ ಪಡೆದು 50 ಸಾವಿರ ಬಹುಮಾನ ಪಡೆದುಕೊಂಡರು.

845 ವಚನ ಹೇಳಿದ ಬೆಳಗಾವಿ ಸವದತ್ತಿಯ ಈರಮ ನಾಲ್ಕನೇ ಸ್ಥಾನ ಪಡೆದಿದ್ದು, 25 ಸಾವಿರ ನಗದು ಬಹುಮಾನ ನೀಡಿದರು.
836 ವಚನ ಹೇಳಿದ ವಿನಾಯಕ ಹಾಗೂ ಸವಿತಾ ಅವರಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದರ ಜತೆ 1,118 ವಚನಗಳನ್ನು ಹೇಳಿದ ಸ್ಥಾನ ಪಡೆದ ಲಾವಣ್ಯ ಅಂಗಡಿ ಗೌರವ ಧನ ನೀಡಲಾಯಿತು. ಲಾವಣ್ಯ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದ್ದರು.
ಈ ಬಾರಿಯ ಸ್ಪರ್ಧೆಯಲ್ಲಿ ಒಟ್ಟಾರೆ 15,705 ವಚನಗಳನ್ನು ಸ್ಪರ್ಧೆಗಳು ಕಂಠಪಾಠ ಮಾಡಿ ಹೇಳಿದ್ದಾರೆ. ದೇಶದಲ್ಲಿ ಇದೇ ದೊಡ್ಡ ಮಠದ ವಚನ ಕಂಠಪಾಠ ಸ್ಪರ್ಧೆಯಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.

ಬಸವಣ್ಣನವರ ಜಯಂತಿಯಲ್ಲಿ ಮಾದರಿ ಕೆಲಸ ಮಾಡುವ ನಿಟ್ಟಿನಲ್ಲಿ ಆರಂಭವಾದ ವಚನ ಕಂಠಪಾಠ ಸ್ಪರ್ಧೆ ಇಂದು ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ವಚನಗಳ ಕಲಿಕೆಗೆ ಇದು ಪ್ರೋತ್ಸಾಹವಾಗಿದ್ದು 12ನೇ ಶತಮಾನದ ಎಲ್ಲಾ ಶರಣರ ವಚನಗಳನ್ನು ಪುಸ್ತಕ ರೂಪದಲ್ಲಿ ತಂದು ಮನೆಮನಗಳಲ್ಲಿ ವಚನಗಳು ಶಾಶ್ವತವಾಗಿ ನೆಲೆಯಾಗುವಂತೆ ಪ್ರಯತ್ನ ಮಾಡಲಾಗುತ್ತದೆ, ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಮೆರವಣಿಗೆ
ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವ ಸಲ್ಲಿಸುವ ಜತೆ ಬಸವಣ್ಣ ಜಯಂತಿಯ ಉತ್ಸವದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಅವರನ್ನು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ಮಾಜಿ ಶಾಸಕ ಎಂ.ವಿ. ನಾಗರಾಜು, ಎನ್ಪಿಎ ಅಧ್ಯಕ್ಷಎಂ. ಕೆ. ನಾಗರಾಜು, ಮಾಜಿ ಅಧ್ಯಕ್ಷ ಮಲ್ಲಯ್ಯ, ನಗರಸಭೆ ಸದಸ್ಯ ಸಿ. ಪ್ರದೀಪ್ ಸೇರಿದಂತೆ ಮತ್ತಿತರರಿದ್ದರು.
