ಬಸವಕಲ್ಯಾಣ
ನಗರದ ಬಸವ ಮಹಾಮನೆಯಲ್ಲಿ ರವಿವಾರ ಆಯೋಜಿಸಲಾಗಿದ್ದ ಬಸವಪರ ಸಂಘಟನೆಗಳ ಪ್ರತಿಭಟನೆಯ ಪೂರ್ವಸಿದ್ಧತಾ ಸಭೆಯಲ್ಲಿ ಕನ್ನೇರಿ ಸ್ವಾಮಿಯ ವಿರುದ್ಧ ತೀವ್ರವಾದ ಆಕ್ರೋಶ ವ್ಯಕ್ತವಾಯಿತು.
ಮಹಾರಾಷ್ಟ್ರ ಬಸವ ಬ್ರಿಗೇಡಿನ ಅವಿನಾಶ ಭೂಸೀಕರ್ ಮಾತನಾಡಿ, ಕೊಲ್ಲಾಪುರದಲ್ಲಿರುವ ಕನ್ನೇರಿ ಮಠ ಮೂಲತಃ ಬಸವತತ್ವದ ಮಠವಾಗಿದೆ.
ಆದರೆ ಪ್ರಸ್ತುತ ಕನ್ನೇರಿ ಸ್ವಾಮಿ ಅಲ್ಲಿ ಶೇ. 1ರಷ್ಟೂ ಬಸವ ತತ್ವದ ಪ್ರಸಾರ ಮಾಡಿಲ್ಲ. ಬಸವಣ್ಣನವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಅವರಿಗೆ ನೈತಿಕ ಹಕ್ಕಿಲ್ಲ. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಕಾನೂನಾತ್ಮಕ ಹೋರಾಟ ನಡೆಸಿ, ಕನ್ನೇರಿ ಮಠವನ್ನು ಸರ್ಕಾರದ ವಶಕ್ಕೆ ಪಡೆದು, ಅಲ್ಲಿ ಬಸವ ತತ್ವ ಪ್ರಸಾರ ಮಾಡುವ ಸೂಕ್ತ ಪೀಠಾಧಿಪತಿಯನ್ನು ನೇಮಿಸುತ್ತೇವೆ, ಎಂದರು.
ಇದೇ ವೇಳೆ, ಮಹಾರಾಷ್ಟ್ರದಾದ್ಯಂತ ಬಸವ ತತ್ವವನ್ನು ಪ್ರಸಾರ ಮಾಡಿದ ನಿಜವಾದ ಕೀರ್ತಿ ಭಾಲ್ಕಿ ಮಠದ ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದು ಅವರು ಸ್ಮರಿಸಿದರು.
ಸಭೆಯ ಸಾನಿಧ್ಯ ವಹಿಸಿದ್ದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಕನ್ನೇರಿ ಮಠ ಬಸವತತ್ವದ ಕಾಡಸಿದ್ದೇಶ್ವರ ಶರಣರ ಮಠವಾಗಿದೆ. ಆದರೆ ಇಂದಿನ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಬಸವತತ್ವ ವಿರೋಧಿ ಆಗಿದ್ದಾರೆ. ಅವರ ಮಠದಲ್ಲಿನ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ದೇಶದ ಮಹಾನುಭಾವರ ನೂರಾರು ಭಾವಚಿತ್ರ ಅಳವಡಿಸಿದ್ದರೂ ಬಸವಣ್ಣನವರದ್ದು ಇರಲಿಲ್ಲ.

ಅವರ ಇತರೆ ಸಮಾರಂಭಗಳಲ್ಲೂ ಬಸವಣ್ಣನವರ ಭಾವಚಿತ್ರ ಇರುವುದಿಲ್ಲ. ಕರ್ನಾಟಕದಾದ್ಯಂತ ಬಸವ ಸಂಸ್ಕೃತಿ ಯಾತ್ರೆ ಯಶಸ್ವಿಯಾಗಿ ನಡೆದಿರುವುದರಿಂದ ಮೊದಲಿನಿಂದಲೂ ಬಸವತತ್ವಕ್ಕೆ ವಿರುದ್ಧವಾಗಿಯೇ ವರ್ತಿಸುವ ಈ ಸ್ವಾಮೀಯ ಹೊಟ್ಟೆಕಿಚ್ಚು ಹೆಚ್ಚಿತು, ಎಂದರು.
ಸಮಾವೇಶ ತಡೆಯುವ ಜೊತೆಯಲ್ಲೇ ಮಹಾರಾಷ್ಟ್ರದ ಭಕ್ತರ ಸಹಕಾರದಿಂದ ಹೋರಾಟದ ಮುಂದಿನ ಹೆಜ್ಜೆಯಾಗಿ ಕೊಲ್ಲಾಪುರದ ಕನ್ನೇರಿ ಮಠವನ್ನು ಬಸವ ಸಂಸ್ಕೃತಿಯ ಮಠವಾಗಿಸುವುದಕ್ಕೂ ಪ್ರಯತ್ನಿಸಬೇಕಾಗಿದೆ. ಅಲ್ಲಿ ಪ್ರತಿ ವರ್ಷ ಬಸವಜಯಂತಿ ಆಚರಿಸುವಂತೆ ಒತ್ತಡ ಹೇರಬೇಕಾಗಿದೆ. ಹಿಂದೂ ಸಮಾವೇಶ ತಡೆಯುವುದಕ್ಕಾಗಿ ಆಗ್ರಹಿಸಿ ಸಚಿವ ಈಶ್ವರ ಖಂಡ್ರೆ ಅವರಿಗೂ ಬಹುಸಂಖ್ಯೆಯಲ್ಲಿ ಹೋಗಿ ಮನವಿಪತ್ರ ಸಲ್ಲಿಸಲಾಗುವುದು’ ಎಂದರು.
