ಹೊಸಪೇಟೆ:
ನಗರದ ಬಸವ ಬಳಗದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬಸವ ಪಂಚಮಿಯನ್ನು ಸಮಾಜಮುಖಿ ಹಾಗೂ ಮೌಢ್ಯ ವಿರೋಧಿ ಸಂದೇಶದೊಂದಿಗೆ ಆಚರಿಸಲಾಯಿತು.
ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ವೈಚಾರಿಕತೆಯ ತತ್ವಗಳನ್ನು ಸಾರುವ ಉದ್ಧೇಶದಿಂದ, ಬಸವ ಪಂಚಮಿ ಸಂದರ್ಭದಲ್ಲಿ ಹಾವುಗಳಿಗೆ ಹಾಲು ನೀಡುವಂತಹ ಮೌಢ್ಯ ಆಚರಣೆಗಳಿಗೆ ಬದಲಾಗಿ, ಅಗತ್ಯವಿರುವ ಮಕ್ಕಳಿಗೆ ಹಾಲು ಮತ್ತು ಉಪಹಾರ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ “ಹಾವಿಗೆ ಹಾಲು ಬೇಡ – ಮಕ್ಕಳಿಗೆ ಹಾಲು ನೀಡಿ” ಹಾಗೂ “ಹಾವಿಗೆ ಹಾಲು ಇಲ್ಲ, ಮಕ್ಕಳಿಗೆ ಮಾತ್ರ”ಎಂಬ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಹಾವಿಗೆ ಹಾಲು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ವೈಜ್ಞಾನಿಕ ಅರಿವು ಮೂಡಿಸುವುದರ ಜೊತೆಗೆ, ಹಾಲು ಮತ್ತು ಪೌಷ್ಟಿಕ ಆಹಾರದ ಅಗತ್ಯವಿರುವ ಮಕ್ಕಳಿಗೆ ಅದನ್ನು ನೀಡುವುದು ನಿಜವಾದ ಮಾನವೀಯ ಸೇವೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಬಸವಣ್ಣನವರು ಪ್ರತಿಪಾದಿಸಿದ ವೈಚಾರಿಕತೆ, ಮಾನವೀಯತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ಸಮಾಜದಲ್ಲಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಕ್ಕಳಿಗೆ ಹಾಲು ಮತ್ತು ಉಪಹಾರ ವಿತರಿಸುವ ಮೂಲಕ ಬಸವ ಪಂಚಮಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯವನ್ನಾಗಿ ರೂಪಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವ ಬಳಗದ, ಸದಸ್ಯರು, ಭಾಗವಹಿಸಿ ಮಕ್ಕಳಿಗೆ ಹಾಲು ಮತ್ತು ಉಪಹಾರ ವಿತರಿಸಿದರು.
“ಮೌಢ್ಯಕ್ಕೆ ಹಾಲು ಬೇಡ, ಮಕ್ಕಳಿಗೆ ಹಾಲು ಬೇಕು; ಆಚರಣೆಗಿಂತ ಮಾನವೀಯತೆ ಮುಖ್ಯ” ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಬಸವಣ್ಣನವರ ವೈಚಾರಿಕ ಮತ್ತು ದಾಸೋಹದ ಆಶಯಗಳಿಗೆ ಪೂರಕವಾಗಿ ಮೂಡಿಬಂದಿತು.
